ದಾವಣಗೆರೆ : ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಪರಿಸರ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಗಿಡಗಳನ್ನು ನೆಟ್ಟು ನಿರ್ವಹಣೆ ನಿರ್ಲಕ್ಷೃ ಮಾಡಿದ್ದು ಅದರಿಂದ ಉಂಟಾಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಪರಿಸರ ಪ್ರೇಮಿ ಬಲ್ಲೂರು ರವಿಕುಮಾರ್ ಆಗ್ರಹಿಸಿದ್ದಾರೆ.
ಮಳೆಯ ಅಭಾವದಿಂದ ಅಲ್ಲಿ ಗಿಡಗಳು ಬೆಳೆದಿಲ್ಲ. ಗೇಟಿಗೆ ಬೀಗ ಹಾಕಿ ಮುಳ್ಳು ಹಾಕಲಾಗಿದೆ. ಅದರೊಳಗೆ ಹೋಗಲೂ ಸಾಧ್ಯವಿಲ್ಲ. ಟ್ಯಾಂಕರ್ಗಳ ಮೂಲಕ ನೀರು ತರಿಸಿ ಹಾಕಿದ್ದರೆ ಆ ಗಿಡಗಳನ್ನು ಉಳಿಸಿಕೊಳ್ಳಬಹುದಿತ್ತು ಎಂದು ಅವರು ಹೇಳಿದ್ದಾರೆ.
ಈಗ ಉಂಟಾಗಿರುವ ನಷ್ಟವನ್ನು ಭರಿಸಲು ಆ ಇಲಾಖೆಯ ಮುಖ್ಯಸ್ಥರಿಂದಲೇ ಹಣ ಮರುಪಾವತಿ ಮಾಡಿಸಿಕೊಳ್ಳಬೇಕು. ಹೊಸದಾಗಿ ಒಂದು ಕೊಳವೆಬಾವಿ ಕೊರೆಸಿ ಸಸಿಗಳಿಗೆ ನೀರು ಹರಿಸಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಈ ಕಾರ್ಯಕ್ಕೆ ಪರಿಸರ ಪ್ರೇಮಿಗಳು ಕೈಜೋಡಿಸಬೇಕು. ಜಿಲ್ಲಾಧಿಕಾರಿ ತುರ್ತು ಸಭೆ ಕರೆದು ಪರಿಸರದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.