ದಾವಣಗೆರೆ : ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ದಾವಣಗೆರೆಗೆ ಆಗಮಿಸಿದ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಶನಿವಾರ ಸಂಭ್ರಮದ ಸ್ವಾಗತ ಕೋರಿದರು.
ಬೆಂಗಳೂರಿನಿಂದ ಹೊರಟು ಮಾರ್ಗ ಮಧ್ಯೆ ಸಿರಿಗೆರೆಗೆ ತೆರಳಿ ತರಬಾಳು ಶ್ರೀಗಳ ಆಶೀರ್ವಾದ ಪಡೆದ ಮಲ್ಲಿಕಾರ್ಜುನ್ ಅವರಿಗೆ ಹೆಬ್ಬಾಳ್ ಟೋಲ್ ಗೇಟ್ ಬಳಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಅಲ್ಲಿಂದಲೇ ಬೈಕ್ ರ್ಯಾಲಿ ಆರಂಭಗೊಂಡಿತು.
ದಾವಣಗೆರೆಗೆ ಆಗಮಿಸಿದ ಮಲ್ಲಿಕಾರ್ಜುನ್ ಶಾಮನೂರು ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಅಲ್ಲಿಂದ ಅವರು ಜಿಲ್ಲಾ ಪಂಚಾಯಿತಿ ಬಳಿ ಬಂದಾಗ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ವಾದ್ಯಗಳನ್ನು ನುಡಿಸಿ ಸಂಭ್ರಮದಿಂದ ಸ್ವಾಗತಿಸಿದರು. ಹಾರ, ತುರಾಯಿ ಹಾಕಲು ಮುಗಿಬಿದ್ದರು.
ನಂತರ ಜಿ.ಪಂ. ಆವರಣದಲ್ಲಿರುವ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಮಲ್ಲಿಕಾರ್ಜುನ್ ಪುಷ್ಪಾರ್ಚನೆ ಮಾಡಿದರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ. ಸಿಇಒ ಸುರೇಶ ಬಿ. ಇಟ್ನಾಳ್, ಎಸ್ಪಿ ಡಾ.ಕೆ. ಅರುಣ್ ಸೇರಿ ಹಿರಿಯ ಅಧಿಕಾರಿಗಳು ಇದ್ದರು.
ನಂತರ ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಆರಂಭವಾಯಿತು. ಎಸ್ಸೆಸ್ಸೆಂಗೆ ಕಾಂಗ್ರೆಸ್ ಶಾಸಕರಾದ ಡಿ.ಜಿ. ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಶಿವಗಂಗಾ ಬಸವರಾಜ್, ಪಕ್ಷೇತರ ಶಾಸಕಿ ಎಂ.ಪಿ. ಲತಾ (ಹರಪನಹಳ್ಳಿ) ಸಾಥ್ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ಎಸ್. ರಾಮಪ್ಪ, ಮುದೇಗೌಡ್ರ ಗಿರೀಶ್ ಸೇರಿ ಅನೇಕ ಮುಖಂಡರು ಇದ್ದರು.
ಮೆರವಣಿಗೆಯು ಹದಡಿ ರಸ್ತೆಯ ಮೂಲಕ ತೆರಳಿ 60 ಅಡಿ ರಸ್ತೆ, ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬಂದು ಜಯದೇವ ವೃತ್ತದ ಬಳಿ ಮುಕ್ತಾಯವಾಯಿತು.
…
* ಗಮನ ಸೆಳೆದ ಸಾರೋಟು
ಸಚಿವ ಮಲ್ಲಿಕಾರ್ಜುನ್ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲು ಜಿ.ಪಂ. ಆವರಣದಲ್ಲಿ ನಿಲ್ಲಿಸಲಾಗಿದ್ದ ವಿಶೇಷ ಸಾರೋಟು ಎಲ್ಲರ ಗಮನ ಸೆಳೆಯಿತು.
ಚೆಕ್ ಗಣರಾಜ್ಯದ ಈ ಸಾರೋಟಿನಲ್ಲಿ ಏರ್ ಸಸ್ಪೆನ್ಷನ್, ಡಿಸ್ಕ್ಬ್ರೇಕ್ ವ್ಯವಸ್ಥೆಯಿದೆ. ಅದನ್ನು ಮುನ್ನಡೆಸುವ ಕುದುರೆಯ ಹೆಸರು ಬರಾಕ್ ಪಿಂಟೋ (ಭೀಮ). ಅಲ್ಲಿ ಸೇರಿದ್ದ ಅಭಿಮಾನಿಗಳು ಸಾರೋಟಿನ ಮುಂದೆ ನಿಂತು ಸೆಲ್ಫಿ ಪಡೆದುಕೊಂಡರು. ಮಲ್ಲಿಕಾರ್ಜುನ್ ಅವರು ಸಾರೋಟಿನಲ್ಲಿ ತೆರಳದೆ ತೆರೆದ ವಾಹನದಲ್ಲಿ ಹೊರಟರು.