ದಾವಣಗೆರೆ : ಏಷ್ಯಾ ಖಂಡದಲ್ಲಿಯೆ ಅಪರೂಪದ ವನ್ಯಜೀವಿಯಾದ ಕೊಂಡುಕುರಿಯ ಚಿತ್ರವನ್ನು ಮತದಾರರ ಜಾಗೃತಿ ಚಿಹ್ನೆಯಾಗಿ (ಮ್ಯಾಸ್ಕಟ್) ಜಿಲ್ಲಾಡಳಿತ ಬಳಕೆ ಮಾಡಿಕೊಂಡಿದೆ.
ಜಗಳೂರು ತಾಲೂಕು ರಂಗಯ್ಯನದುರ್ಗ ಅರಣ್ಯದಲ್ಲಿ ಸಿಗುವ, ಜಿಂಕೆಯನ್ನು ಹೋಲುವ ನಗುಮೊಗದ ಪ್ರಾಣಿ ಕೊಂಡುಕುರಿಯ ಓಟದ ರೀತಿಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಗುರಿ ಹೊಂದಿದೆ. ಜಿಲ್ಲಾಡಳಿತ ಭವನದಲ್ಲಿ ಇತ್ತೀಚೆಗೆ ಜಾಗೃತಿ ಚಿಹ್ನೆಯನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಚುನಾವಣಾ ವೀಕ್ಷಕಿ ಎಂ. ಲಕ್ಷ್ಮೀ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಇದ್ದರು.
ಕೊಂಡುಕುರಿಯ ವಿಶೇಷವೆಂದರೆ ಇದಕ್ಕೆ ನಾಲ್ಕು ಕೊಂಬುಗಳಿದ್ದು ಜಿಂಕೆಯ ಆಕಾರ ಹೊಂದಿದೆ. ನಾಚಿಕೆ ಸ್ವಭಾವದ ಈ ಜೀವಿಯ ಸಂತತಿಯನ್ನು ಸಂರಕ್ಷಣೆ ಮಾಡಲು ರಂಗಯ್ಯನದುರ್ಗ ಅರಣ್ಯವನ್ನು ಮೀಸಲಿರಿಸಲಾಗಿದೆ.
ಕೊಂಡುಕುರಿಯನ್ನು ಜಿಲ್ಲೆಯ ಐಕಾನ್ ಎಂದು ಕರೆಯಬಹುದಾಗಿದ್ದು, ಚುನಾವಣಾ ಸೌಮ್ಯತೆ ಹೆಚ್ಚಿಸುವ ಸಂದೇಶದೊಂದಿಗೆ ಮ್ಯಾಸ್ಕಟ್ ಆಗಿ ಬಳಕೆ ಮಾಡಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಅಭಿಪ್ರಾಯಪಟ್ಟಿದ್ದಾರೆ.