ದಾವಣಗೆರೆ: ವಿದ್ಯಾರ್ಥಿಗಳು ಕಲಿಯುವ ಹಂಬಲ ಹಾಗೂ ಸಾಧಿಸುವ ಛಲದಿಂದ ಮುನ್ನಡೆಯಬೇಕು ಎಂದು ವಿಜಯ ಟ್ರೇಡರ್ಸ್ ಕಂಪನಿ ಮಾಲೀಕ ಆರ್.ಎಸ್. ನಾಗಭೂಷಣ್ ತಿಳಿಸಿದರು.
ನಗರದ ಜಿಎಂಐಟಿ ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಪಾಲಿಟೆಕ್ನಿಕ್ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಪ್ರೋಗ್ರಾಮ್ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಕಲಿಕೆ ಮತ್ತು ಸಾಧನೆಯಿಂದ ವಿಶೇಷ ವ್ಯಕ್ತಿತ್ವ ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.
ಡಾ.ಎಚ್.ಡಿ. ಮಹೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಬದ್ಧತೆ ಪ್ರದರ್ಶಿಸುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ತಿಳಿಸಿದರು.
ಜಿಎಂಐಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಸಂಜಯ್ ಪಾಂಡೆ ಮಾತನಾಡಿ, ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಹಾಗೂ ಕಾಲೇಜಿನ ಪ್ರಾಚಾರ್ಯರು ಮತ್ತು ಅಧ್ಯಾಪಕರೊಡನೆ ಸತತ ಸಂಪರ್ಕದಿಂದ ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಜಿಎಂಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಬಿ.ಆರ್. ಶ್ರೀಧರ್ ಮಾತನಾಡಿ, ಈ ಬಾರಿ ಕಾಲೇಜಿನ ಎಲ್ಲಾ ಡಿಪ್ಲೋಮಾ ಕೋರ್ಸ್ ಸೀಟುಗಳು ಭರ್ತಿಯಾಗಿವೆ ಎಂದು ತಿಳಿಸಿದರು.
ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ ಮಾತನಾಡಿ, ಮುಂಬರುವ ತರಬೇತಿ
ಕಾರ್ಯಕ್ರಮ ಮತ್ತು ಕೈಗಾರಿಕೆಗಳಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ಮನದಟ್ಟು ಮಾಡಿದರು.
ಕಾಲೇಜಿನ ಆಡಳಿತ ಅಧಿಕಾರಿ ವೈ.ಯು. ಸುಭಾಷ್ಚಂದ್ರ ಇದ್ದರು. ಸಿವಿಲ್ ವಿಭಾಗದ ಮುಖ್ಯಸ್ಥ ಸಿ. ನಿಂಗರಾಜು ಮತ್ತು ಮೆಕಾನಿಕಲ್ ವಿಭಾಗದ ಅಧ್ಯಾಪಕಿ ಯಾಸ್ಮಿನ್ ಬೇಗಮ್ ನಿರೂಪಿಸಿದರು.