ಕರೊನಾ ನಿಯಂತ್ರಣದ ನಂತರ ಮುಂದಿನ ನಿರ್ಧಾರ | ಕಾರಟಗಿ ವರ್ತಕರಿಗೆ ಗಂಗಾವತಿ, ಸಿಂಧನೂರು ವ್ಯಾಪಾರಿಗಳ ಸಾಥ್
ಕಾರಟಗಿ: ತಮಿಳುನಾಡಿಗೆ ಏಪ್ರಿಲ್ ಅಂತ್ಯದವರೆಗೂ ಭತ್ತ ರಫ್ತು ಮಾಡದಿರಲು ಪಟ್ಟಣದ ಭತ್ತ ಮತ್ತು ಅಕ್ಕಿ ವಿಶೇಷ ಮಾರುಕಟ್ಟೆ ಸಮಿತಿಯ ದಲಾಲಿ ವರ್ತಕರ ಸಂಘ ನಿರ್ಧರಿಸಿದೆ.
ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರೊನಾ ವಿಸ್ತರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ಬರುವ ಲಕ್ಷಣ ಕಡಿಮೆ ಎನ್ನುವಂತಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಕರೊನಾ ಸೋಂಕಿತರು ಹೆಚ್ಚಿದ್ದಾರೆ. ಭತ್ತ ಆಮದು, ರಫ್ತು ಮಾಡು ವೇಳೆ ಸೋಂಕು ತಗುಲುವ ಸಂಭವವಿದೆ. ಇದರಿಂದ ರಫ್ತು ಮಾಡದಿರಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಿತ್ಯ ತಮಿಳುನಾಡಿನ ವಿವಿಧ ನಗರ, ಪಟ್ಟಣಗಳಿಗೆ ಈ ಹಿಂದೆ ಸಾಮಾನ್ಯವಾಗಿ ಸೀಸನ್ನಲ್ಲಿ ನಿತ್ಯ 250-300 ಲೋಡ್ ಭತ್ತ ಸಾಗಣೆಯಾಗುತ್ತಿತ್ತು. ಕರೊನಾ ಭೀತಿ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾರಟಗಿ ಹಾಗೂ ಗಂಗಾವತಿ ಎಪಿಎಂಸಿಗಳಿಂದ ಸಿಂಧನೂರು ಮಾರುಕಟ್ಟೆಗೆ ಅನೇಕ ಲೋಡ್ಗಳು ರವಾನೆಯಾಗುತ್ತಿವೆ. ಈವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಂದು ಸೋಂಕು ದೃಢಪಟ್ಟಿಲ್ಲ. ಹೊರ ರಾಜ್ಯದಿಂದ ವ್ಯಾಪಾರಕ್ಕೆ ಬಂದವರಿಂದ ಸ್ಥಳೀಯರಿಗೆ ವೈರಸ್ ಹರಡಿದಿದರೆ ಹೇಗೆ ಎಂದು ಆತಂಕಗೊಂಡ ಮಾರುಕಟ್ಟೆ ವರ್ತಕರು ಮುಂಜಾಗೃತ ಕ್ರಮವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಕಾರಟಗಿ ದಲಾಲಿ ವರ್ತಕರ ಸಂಘದ ನಿರ್ಧಾರಕ್ಕೆ ಗಂಗಾವತಿ ಮತ್ತು ಸಿಂಧನೂರು ವರ್ತಕರು ಬೆಂಬಲಿಸಿದ್ದಾರೆ. ತಮಿಳುನಾಡಿನೊಂದಿಗೆ ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಲು ಅವರೂ ನಿರ್ಧರಿಸಿದ್ದಾರೆ. ತಮಿಳುನಾಡು ಜತೆಗೆ ಆಂಧ್ರ, ತೆಲಂಗಾಣಗಲಿಂದಲೂ ಭತ್ತ, ಅಕ್ಕಿ ಆಮದು, ರಫ್ತು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಭತ್ತ ರಫ್ತು ಮಾಡುವುದನ್ನು ಏಪ್ರಿಲ್ ಅಂತ್ಯದವರೆಗೆ ನಿಭರ್ಂಧಿಸಲಾಗಿದೆ. ವ್ಯಾಪಾರಕ್ಕಿಂತ ಮಾನವೀಯತೆ ಮುಖ್ಯ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾರಟಗಿ, ಸಿಂಧನೂರು, ಗಂಗಾವತಿ ತಾಲೂಕುಗಳ ಮಾರುಕಟ್ಟೆ ಸಮಿತಿಗಳು ಸಹ ಈ ನಿರ್ದಾರ ಬೆಂಬಲಿಸಿವೆ. ವೈರಸ್ ನಿಯಂತ್ರಣ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
| ಬಿ. ಶರಣಯ್ಯಸ್ವಾಮಿ
ದಲಾಲಿ ವರ್ತಕರ ಸಂಘದ ಅಧ್ಯಕ್ಷ, ಕಾರಟಗಿ