ಮುಂಬೈ: ಸಂಕಷ್ಟಗಳು ಬಂದರೆ ಒಂದರ ಮೇಲೊಂದು ಬರುತ್ತಲೇ ಇರುತ್ತದೆ ಎಂಬ ಮಾತು ಸದ್ಯ ಮುಂಬೈ ಪಾಲಿಗೆ ಅಕ್ಷರಶಃ ನಿಜವಾಗಿದೆ.
ಇದಾಗಲೇ ಕರೊನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಮುಂಬೈನಲ್ಲಿ ನಿಸರ್ಗ ಚಂಡಮಾರುತ ತನ್ನ ಭೀಕರತೆಯನ್ನು ಪ್ರದರ್ಶಿಸಲು ಶುರು ಮಾಡಿದೆ. 100 ಕಿ.ಮೀ ವೇಗದಲ್ಲಿ ಮುನ್ನುಗ್ಗಿ ಈ ಚಂಡಮಾರುತ ಮುಂಬೈನತ್ತ ಬರುತ್ತಿದ್ದು, ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸುವ ಆತಂಕ ಕಾಡುತ್ತಿದೆ.
ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡಮಾರುತ ಸೃಷ್ಟಿಯಾಗಿದೆ. ಈ ಚಂಡಮಾರುತ ಮುಂಬೈ ಕರಾವಳಿ ಪ್ರದೇಶದ ಸಮೀಪವೇ ಹಾದು ಹೋಗಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ಎಲ್ಲೆಲ್ಲೂ ಹೆಣಗಳ ರಾಶಿ: ಹತ್ತಿರ ಸುಳಿಯದ ಸಂಬಂಧಿಕರು- ಚಿಕಿತ್ಸೆಗೆ ದಿನಗಟ್ಟಲೆ ಕಾಯುವ ಸ್ಥಿತಿ!
ಈ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಇದಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಜೊತೆ ನಿಸರ್ಗ ಚಂಡಮಾರುತ ಎದುರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಸರ್ಕಾರವೂ ಪೂರಕ ಸಿದ್ಧತೆ ನಡೆಸಿದೆ.
ಆದರೂ ಚಂಡಮಾರುತ ತನ್ನ ಪ್ರಭಾವವನ್ನು ಯಾವ ರೀತಿಯಲ್ಲಿ ತೋರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಏಕೆಂದರೆ ಇದೀಗ 100 ಕಿ.ಮೀ ವೇಗದಲ್ಲಿ ಮುಂಬೈನತ್ತ ಧಾವಿಸಿಬರುತ್ತಿದೆ. ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಬೆನ್ನಲ್ಲೇ ಇದೀಗ ನಿಸರ್ಗದ ಬಗ್ಗೆ ಹೆಚ್ಚು ಆತಂಕ ಉಂಟಾಗಿದೆ.
ಇದನ್ನೂ ಓದಿ: ಕರೊನಾ, ಅಂಫಾನ್ ನಡುವೆಯೇ ಈಗ ಅಬ್ಬರಿಸಲಿದೆ ‘ನಿಸರ್ಗ’! ರಾಜ್ಯದ ಮೇಲೂ ಪರಿಣಾಮ
ಏಕೆಂದರೆ ಮಹಾರಾಷ್ಟ್ರ ರಾಜ್ಯ ಅದರಲ್ಲಿಯೂ ಮುಂಬೈ ನಗರಿ ಈಗಾಗಲೇ ಕರೊನಾ ಸೋಂಕಿನಿಂದ ನಲುಗಿ ಹೋಗಿದೆ. ಸಾವಿನ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಲೇ ಇದ್ದು, ಸೋಂಕಿತರು ಗುಣಮುಖರಾಗಿರುವ ಉದಾಹರಣೆ ಇಲ್ಲಿ ಇಲ್ಲ. ಇಂಥ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಚಂಡಮಾರುತ ಇನ್ನಷ್ಟು ಭಯಾನಕ ವಾತಾವರಣ ಸೃಷ್ಟಿಸಿದೆ! (ಏಜೆನ್ಸೀಸ್)