ಚಿಕ್ಕಮಗಳೂರು: ಅನ್ನಭಾಗ್ಯ ಯೋಜನೆಗ್ಎ ಸಂಬಂಧಿಸಿದಂತೆ ಭಾರತೀಯ ಆಹಾರ ನಿಗಮ(FIC) ನಿಮಗೆ ಪತ್ರ ಕೊಟ್ಟಿತ್ತೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಿಂದ ಅಕ್ಕಿ ಕಳುಹಿಸುತ್ತೇವೆ ಚೀಲದ ಮೇಲೆ ನಿಮ್ಮ ಹೆಸರು ಹಾಕಿಕೊಂಡು ವಿತರಿಸಿ ಎಂದು ಆಹಾರ ನಿಗಮ ಪತ್ರ ನೀಡಿದೆಯೇ. ಸಿದ್ದರಾಮಯ್ಯ ಅವರು ಸುಳ್ಳುರಾಮಯ್ಯ ಅಲ್ಲ ಎನ್ನುವುದಾದರೆ ಪತ್ರ ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಗೂಬೆ ಕೂರಿಸುವುದು ಸರಿಯಲ್ಲ
ರಾಜ್ಯ ಸರ್ಕಾರದಿಂದ ಆಗದಿರುವ ಕೆಲಸಕ್ಕೆ ಕೇಂದ್ರದ ಮೇಲೆ ಈಗಿನಿಂದಲ್ಲೇ ಬೊಟ್ಟು ಮಾಡಲು ಶುರು ಮಾಡಿದ್ಧಾರೆ. ಯೋಜನೆ ಜಾರಿಯಾದ ನಾಲ್ಕೈದು ತಿಂಗಳ ಬಳಿಕ ದೂರುತ್ತಾರೆ ಎಂದು ಭಾವಿಸಿದ್ದೆ. ಆದರೆ, ಇವರು ಈಗಿನಿಂದಲ್ಲೇ ಶುರು ಮಾಡಿಕೊಂಡಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ. ಹಣ ಕೊಟ್ಟರೆ ಅಕ್ಕಿ ಸಿಗುತ್ತದೆ. 10 ಕೆಜಿ ಅಕ್ಕಿ ಕೊಡುವುದಕ್ಕೆ ಆಗಲಿಲ್ಲವೆಂದರೆ ಬಿಪಿಎಲ್-ಎಪಿಎಲ್ ಪಡಿತರ ಚೀಟಿದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿಯನ್ನು ಕೊಂಡುಕೊಳ್ಳುತ್ತಾರೆ. ಕೊಟ್ಟರೆ ನಾನೇ ಕೊಟ್ಟೆ ಎಂದು ಹೇಳಿಕೊಳ್ಳುವುದು ಇಲ್ಲವಾದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ತಾತ್ಕಾಲಿಕ, ಕೈಗಾರಿಕೋದ್ಯಮಿಗಳು ವಲಸೆ ಹೋಗುವ ಅವಶ್ಯಕತೆಯಿಲ್ಲ: ಸತೀಶ್ ಜಾರಕಿಹೊಳಿ
ಇದೆಲ್ಲವೂ ಅರ್ಥವಾಗುತ್ತಿದೆ
ಜನರಿಗೆ ಕೊಡುವ ಸಮಯದಲ್ಲಿ ಮಾಡುವ ಸದ್ದು, ಕಿತ್ತುಕೊಳ್ಳುವಾಗ ಯಾಕೆ ಇರುವುದಿಲ್ಲ. ವಿದ್ಯುತ್ ದರವನ್ನು ಮೆಲ್ಲಗೆ ಏರಿಸಿ ಹಿಂದಿನ ಸರ್ಕಾರ ಮಾಡಿದ್ದು, ಎನ್ನುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ KERC ಪ್ರಸ್ತಾವನೆ ಇಟ್ಟಿತ್ತು. ಆದರೆ, ಅನುಮತಿ ನೀಡಿರಲಿಲ್ಲ. ಸದ್ದಿಲ್ಲದೆ ಮದ್ಯದ ದರವನ್ನು ಸಹ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಎಲ್ಲದರ ದರವನ್ನು ಮೆತ್ತಗೆ ಹೆಚ್ಚಿಸಲಾಗುತ್ತಿದೆ. ಕಾಂಗ್ರೆಸ್ ಒಂದು ಕಡೆ ಕೊಟ್ಟು ಮತ್ತೊಂದೆಡೆ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಜನರಿಗೆ ಇದೆಲ್ಲವೂ ಅರ್ಥವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.