ಶಿವಮೊಗ್ಗ: ಸಂಶೋಧನೆ ಎಂಬುದು ಒಂದು ದೇಶದ ಸಾಂಸ್ಕೃತಿಕ, ಪಾರಂಪರಿಕ, ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಪ್ರತಿನಿಧಿಯಾಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಲಿದೆ ಎಂದು ದಕ್ಷಿಣ ಕೋರಿಯಾದ ಗುಂನ್ಸನ್ ಪ್ರದೇಶದ ಕುನ್ಸನ್ ರಾಷ್ಟ್ರೀಯ ವಿವಿ ಪ್ರಾಧ್ಯಾಪಕ ಡಾ. ಇನ್ ಹೋ ರಾ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಗುರುವಾರ ಐಇಇಇ ಸಹಭಾಗಿತ್ವದಲ್ಲಿ ಅಮಾತೆ-2024 ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಪ್ರಪಂಚದ ವಿವಿಧ ದೇಶಗಳು ನಡೆಸುತ್ತಿರುವ ಅದ್ವಿತೀಯ ಸಂಶೋಧನಾ ವಿಷಯಗಳ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಒಡಮೂಡುವ ವಿಚಾರಗಳಿಂದ ಒಂದು ಉತ್ತಮ ವೇದಿಕೆ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಅಮಾತೆ ಮಾದರಿಯ ಸಮ್ಮೇಳನಗಳು ಕಂಪ್ಯೂಟರ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಸೇಜ್ ಲರ್ನಿಂಗ್ ಹಾಗೂ ತತ್ಸಂಬಂಧ ಕ್ಷೇತ್ರಗಳಲ್ಲಿ ಜರುಗುವ ಸಂಶೋಧನೆಗಳ ಬಗ್ಗೆ ಆಮೂಲಾಗ್ರ ಮಾಹಿತಿ ನೀಡುವಲ್ಲಿ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಿವೆ ಎಂದು ಹೇಳಿದರು.
ಪಿಇಎಸ್ ಟ್ರಸ್ಟ್ನ ಸಿಒಒ ಬಿ.ಆರ್.ಸುಭಾಷ್ ಮಾತನಾಡಿ, ಮೆಡಿಕಲ್ ಕ್ಷೇತ್ರದಲ್ಲಿ ಜನರ ಆರೋಗ್ಯವನ್ನು ಸರ್ವಾಂಗೀಣ ರೀತಿಯಲ್ಲಿ ಸುಧಾರಿಸುವ ಹಾಗೂ ಅಸಾಧಾರಣ ಮಟ್ಟದಲ್ಲಿ ತಂತ್ರಜ್ಞಾನಗಳ ಸದ್ಬಳಕೆ, ವಿನಿಯೋಗದ ಬಗ್ಗೆ ನಡೆಯುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಒಂದು ಕಾಲದಲ್ಲಿ ಗಗನಕುಸುಮವೆಂದು ಬಿಂಬಿತ ವೈದ್ಯಕೀಯ ಶಸ್ತ್ರಚಿಕಿತ್ಸೆಗಳು, ಔಷದೋಪಚಾರಗಳು ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಎಲ್ಲ ವರ್ಗದ ಜನಗಳಿಗೂ ತಲುಸುತ್ತಿರುವುದು ವಿಶ್ವಾಸನೀಯ ಎಂದರು.
ದೇಶ ವಿದೇಶದ 250ಕ್ಕೂ ಅಧಿಕ ಸಂಶೋಧನಾಕಾಂಕ್ಷಿಗಳು, ಬಿಇ, ಎಂಟೆಕ್ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.ಪ್ರಾಚಾರ್ಯ ಡಾ. ಬಿ.ಎನ್.ಯುವರಾಜು, ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್.ಪ್ರಸನ್ನಕುಮಾರ್, ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ. ಲೈಕ್ವಿನ್ ಥಾಮಸ್ ಉಪಸ್ಥಿತರಿದ್ದರು.
ಇಂಜಿನಿಯರಿಂಗ್ ಕ್ಷೇತ್ರದಿಂದ ಅಭಿವೃದ್ಧಿಗೆ ಕೊಡುಗೆ
ತಾಂತ್ರಿಕ, ಕೈಗಾರಿಕಾ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜರುಗುತ್ತಿರುವ ಸಂಶೋಧನೆಗಳು ಮಾನವ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಆರ್.ನಾಗರಾಜ್ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗದಂತಹ ನಗರಗಳಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಟಿಸುವ ಸಂಶೋಧನೆಗಳ ಪ್ರಸ್ತುತತೆಯನ್ನು ತಿಳಿಸಲು ಈ ರೀತಿ ಸಮ್ಮೇಳನಗಳು ಒಂದು ಉತ್ತಮ ವೇದಿಕೆಯಾಗಿ ರೂಪುಗೊಳ್ಳುತ್ತಿವೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಜತೆ ಜತೆಗೆ ಪ್ರಪಂಚದಲ್ಲೆಡೆ ನಡೆಯುತ್ತಿರುವ ಅದ್ವಿತೀಯ ಸಂಶೋಧನೆಗಳ ಪ್ರಸ್ತುತತೆ ಹಾಗೂ ಅನಿವಾರ್ಯತೆ ಬಗ್ಗೆ ವಿಚಾರ ವಿನಿಮಯ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಾರ್ಯ ಕ್ಷೇತ್ರದ ಆಯ್ಕೆ, ತತ್ಸಂಬಂಧ ಕಲ್ಪನಾ ಲಹರಿ ಹಾಗೂ ಪ್ರಾಯೋಗಿಕ ಚಾಕಚಕ್ಯತೆಗಳ ವೃದ್ಧಿ ಬಗೆಗಿನ ಮಾಹಿತಿ ಪಡೆಯುವಲ್ಲಿ ಸದಾಕಾಲ ಕಾರ್ಯ ತತ್ಪರರಾಗಬೇಕಿದೆ ಎಂದರು.