ನವದೆಹಲಿ: 2014ಕ್ಕೂ ಮೊದಲು ಕರೊನಾ ಬಂದು, ಒಂದೊಮ್ಮೆ ದೇಶವನ್ನು ಲಾಕ್ಡೌನ್ ಮಾಡುವ ಪರಿಸ್ಥಿತಿ ಬಂದಿದ್ದರೆ ಏನಾಗುತ್ತಿತ್ತು? ಹೀಗೊಂದು ಕಲ್ಪನೆ ಮಾಡಿಕೊಳ್ಳುವಂತೆ ಹೇಳಿದ್ದರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು.
ಇಂದು ದೆಹಲಿಯಲ್ಲಿ ಸ್ವಚ್ಛಭಾರತ್ ಮಿಷನ್ನ ಸಂವಾದ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಕರೊನಾ ವೈರಸ್ ಸಾಂಕ್ರಾಮಿಕ ರೋಗ 2014ಕ್ಕೂ ಮೊದಲು ದೇಶಕ್ಕೆ ಕಾಲಿಟ್ಟಿದ್ದರೆ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂಬುದನ್ನು ಒಮ್ಮೆ ಕಲ್ಪನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಹಳ್ಳಿಗಳಲ್ಲಿ ಶೌಚಗೃಹಗಳೇ ಇರಲಿಲ್ಲ. ಹೀಗಿದ್ದಾಗ ಕರೊನಾ ಸೋಂಕು ತಡೆಗಟ್ಟುವುದು ಸಾಧ್ಯವಿತ್ತೇ? ಶೇ. 60ರಷ್ಟು ಜನರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾಗ ನಾವು ಲಾಕ್ಡೌನ್ ಹೇರಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.
ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಮಗೆ ಸ್ವಚ್ಛ ಭಾರತ್ ಅಭಿಯಾನ ಇನ್ನಷ್ಟು ಬಲ ನೀಡಿದೆ. ಸ್ವಚ್ಛ ಗೃಹ ಪರಿಕಲ್ಪನೆಯಿಂದಾಗಿ ನಮಗೆ ಕರೊನಾ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಹಾಗೇ, ಕೇಂದ್ರದ ಉದ್ಘಾಟನೆ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ನಿಯಮಗಳನ್ನು ತಪ್ಪದೆ ಪಾಲಿಸಿ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಉತ್ತರ ಪ್ರದೇಶ ಘಟಕದ ಮಾಜಿ ಅಧ್ಯಕ್ಷ ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕ
ಸ್ವಚ್ಛತೆ, ನೈರ್ಮಲ್ಯಕ್ಕೆ ಮಹಾತ್ಮಾ ಗಾಂಧಿಯವರು ನೀಡಿದ್ದ ಪ್ರಾಮುಖ್ಯತೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಪ್ರಾರಂಭಿಸಲಾಗಿದೆ. ಸತ್ಯಾಗ್ರಹದಿಂದಲೇ ಸ್ಫೂರ್ತಿ ಪಡೆದು ಈ ಕೇಂದ್ರದಲ್ಲಿ ಸ್ವಚ್ಛಗೃಹದ ಆಶಯವನ್ನು ಪ್ರಕಟಪಡಿಸಲಾಗುವುದು ಎಂದು ಹೇಳಿದ್ದಾರೆ.
ಹಾಗೇ ರಾಷ್ಟ್ರವನ್ನು ಕಸಮುಕ್ತ ಮಾಡಲುವ ಸಲುವಾಗಿ ಆಗಸ್ಟ್ 8ರಿಂದ 15ರವರೆಗೆ ಒಂದು ವಾರ ಅಭಿಯಾನ ನಡೆಸುವುದಾಗಿ ಮೋದಿ ಘೋಷಿಸಿದರು.(ಏಜೆನ್ಸೀಸ್)
Inaugurating the Rashtriya Swachhata Kendra in Delhi. https://t.co/GBr6MLjJnE
— Narendra Modi (@narendramodi) August 8, 2020