ಲಕ್ಷ್ಮೇಶ್ವರ: ಕರೊನಾ ವೈರಸ್ ಜಗತ್ತನ್ನೇ ತಲ್ಲಣಗೊಳಿಸುತ್ತ ಒಂದು ವರ್ಷ ಕಳೆದಿದೆ. ವೈರಸ್ನ ಭೀಕರತೆಯಿಂದ ಅನೇಕ ಸಾವು- ನೋವು, ಸಂಕಷ್ಟ, ಆರ್ಥಿಕ ಮುಗ್ಗಟ್ಟು ಸೇರಿ ಇಡೀ ಜೀವಸಂಕುಲದ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಆ ಕರಾಳತೆ ಮಾಸಿತು ಎನ್ನುವ ಮುನ್ನವೇ 2ನೇ ಅಲೆಯು ಎಲ್ಲರಲ್ಲಿ ಭೀತಿ ಹುಟ್ಟಿಸಿದೆ.
2020ರಲ್ಲಿ ತಾಲೂಕಿನಲ್ಲಿ 44 ಸಾವು: ಕಳೆದ ವರ್ಷ ಮಾ. 11ರಂದು ತಾಲೂಕಿನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. 22ರಂದು ಜನತಾ ಕರ್ಪ್ಯೂ ಜಾರಿಯಾಗಿತ್ತು. ಬಳಿಕ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕಾಗಿ ತಾಲೂಕಾಡಳಿತ 2 ತಿಂಗಳ ಕಾಲ ನಿಗದಿತ ಅವಧಿಗೆ ಲಾಕ್ಡೌನ್ ಘೊಷಿಸಿತ್ತು. ಆಗ ಇಡೀ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ನಂತರ ಅಲ್ಲಲ್ಲಿ ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೆಚ್ಚಿ ಜನರು ಆತಂಕಿತರಾದರು. ಒಟ್ಟು 755 ಜನರಿಗೆ ಸೋಂಕು ದೃಢಪಟ್ಟು 44 ಜನ ಮೃತಪಟ್ಟಿದ್ದರು. ಸದ್ಯ ತಾಲೂಕಿನಲ್ಲಿ ಯಾವುದೇ ಪಾಸಿಟಿವ್ ಕೇಸ್ ಇಲ್ಲದಿದ್ರೂ ತಾಲೂಕಿನ ಸೂರಣಗಿ, ದೊಡ್ಡೂರ ಗ್ರಾಪಂ ವ್ಯಾಪ್ತಿಯಲ್ಲಿ ಇದೇ ಮಾ. 11ರಂದು 6 ಜನರಲ್ಲಿ ಸೋಂಕು ಪತ್ತೆಯಾಗಿವೆ. ಅದರಲ್ಲಿ ಗರ್ಭಿಣಿ, ಮಕ್ಕಳು ಸೇರಿದ್ದು ಯಾರಿಗೂ ಸೋಂಕಿನ ಲಕ್ಷಣಗಳು ಮತ್ತು ಯಾವುದೇ ಪ್ರವಾಸ ವರದಿ ಇಲ್ಲದಿದ್ದರೂ ಸೋಂಕು ಕಂಡು ಬಂದಿದ್ದು, ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜನತೆ ಸ್ವಯಂಪ್ರೇರಿತರಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಸಂತೆ, ಜಾತ್ರೆ, ಮದುವೆ, ಸಭೆ ಸಮಾರಂಭ, ಧಾರ್ವಿುಕ ಆಚರಣೆ, ರಾಜಕೀಯ ಕಾರ್ಯಕ್ರಮ, ಶವ ಸಂಸ್ಕಾರಗಳಲ್ಲಿ ಹೆಚ್ಚಿನ ಜನರು ಸೇರಕೂಡದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ ಲಸಿಕೆ ಹಾಕಲಾಗುತ್ತಿದೆ. ತಪ್ಪದೇ ಸೋಂಕು ಪರೀಕ್ಷೆ, ಲಸಿಕೆ ಹಾಕಿಸಿಕೊಳ್ಳಬೇಕು.
| ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್
| ಡಾ. ಸುಭಾಸ್ ದಾಯಗೊಂಡ ತಾಲೂಕು ವೈದ್ಯಾಧಿಕಾರಿ