ಬೆಂಗಳೂರು: ಕರೊನಾ ಸೋಂಕು ದೃಢವಾಗುತ್ತಿದ್ದಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ ಸಿಎಂ ಯಡಿಯೂರಪ್ಪ, ತನ್ನ ಜತೆಯಲ್ಲಿ ಪುಸ್ತಕವನ್ನೂ ಕೊಂಡೊಯ್ದಿದ್ದಾರೆ.
ಸಿಎಂ ಬಿಎಸ್ವೈಗೆ ವಯೋಸಹಜ ಬಿಪಿ ಹಾಗೂ ಶುಗರ್ ಸಮಸ್ಯೆ ಇರುವುದರಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲು ವೈದ್ಯರು ನಿರ್ಧರಿಸಿದರು. ಅದರಂತೆ ಸಿಎಂ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಮನೆಯಿಂದ ಆಸ್ಪತ್ರೆಗೆ ಹೋಗುವಾಗ ಸಿಎಂ ತಮ್ಮ ಜತೆಯಲ್ಲಿ ‘ಯಯಾತಿ’ ಪುಸ್ತಕವನ್ನೂ ತೆಗೆದುಕೊಂಡು ಹೋಗಿದ್ದು, ಪುಸ್ತಕ ಓದುತ್ತ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ವಾರವಷ್ಟೇ ‘ಯಯಾತಿ’ ಪುಸ್ತಕ ಓದಲು ಆರಂಭಿಸಿದ್ದರು. ಬೆಳಗ್ಗೆ ಎದ್ದ ತಕ್ಷಣ ಕಷಾಯ ಸೇವಿಸಿದ ಬಿಎಸ್ವೈಗೆ ಬೆಳಗಿನ ಉಪಹಾರಕ್ಕೆ ಸಿಎಂ ನಿವಾಸದ ಸಿಬ್ಬಂದಿ ಉಪ್ಪಿಟ್ಟು ಮತ್ತು ದೋಸೆ ಜತೆಗೆ ವಡೆ ತಂದುಕೊಟ್ಟರು.
ಇದನ್ನೂ ಓದಿರಿ ನಾನು ಯಾವ ಹುದ್ದೆಗೂ ಆಸೆ ಪಟ್ಟಿಲ್ಲ: ಬಿ.ವೈ.ವಿಜಯೇಂದ್ರ
ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರಿ ಪದ್ಮಾವತಿ ಇಬ್ಬರೂ ಮಣಿಪಾಲ್ ಆಸ್ಪತ್ರೆಯ 5ನೇ ಮಹಡಿಯ ಒಂದೇ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ-ಮಗಳಿಗೆ ಅಕ್ಕಪಕ್ಕದ ಬೆಡ್ ಕೊಡಲಾಗಿದೆ. ಆಸ್ಪತ್ರೆಯಿಂದಲೇ ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್ ಮಾಡಿ ಪದ್ಮಾವತಿ ಮಾತನಾಡಿದರು.
7 ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲೇ ಸಿಎಂಗೆ ಚಿಕಿತ್ಸೆ ಮುಂದುವರಿಸುವ ಸಾಧ್ಯತೆ ಇದೆ. 60 ವರ್ಷ ಮೆಲ್ಪಟವರಿಗೆ ಕರೊನಾ ಹೆಚ್ಚು ಅಪಾಯಕಾರಿ. ಹಾಗಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.