ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಾರ್ವಜನಿಕರು ಸೋಂಕಿತರ ಪ್ರಮಾಣ ಕಡಿಮೆ ಆಯಿತು ಎಂದು ತಪ್ಪಾಗಿ ಗ್ರಹಿಸಬಾರದು. ಸರ್ಕಾರದ ಮಾರ್ಗಸೂಚಿಯನ್ನು ಭವಿಷ್ಯದಲ್ಲೂ ಪಾಲಿಸಿ ಸೋಂಕಿನಿಂದ ದೂರ ಉಳಿಯಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಲಹೆ ನೀಡಿದ್ದಾರೆ.
ನಗರದ ಕೆಎಲ್ಇ ಆಸ್ಪತ್ರೆಗೆ ಟಾಟಾ ಎಜ್ಯುಕೇಷನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್ ನೀಡಿರುವ 52 ಲಕ್ಷ ರೂ.ಮೌಲ್ಯದ ಕೋವಿಡ್ ವೈದ್ಯಕೀಯ ಸಾಮಗ್ರಿಗಳನ್ನು ದಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ ಹಾಗೂ ಬೆಳಗಾಂ ಲಯನ್ಸ್ ವತಿಯಿಂದ ಶತಮಾನೋತ್ಸವ ಸಭಾಂಗಣದಲ್ಲಿ ಬುಧವಾರ ಹಸ್ತಾಂತರಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 24,500 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ ಈಗಾಗಲೇ 24,000 ಸೋಂಕಿತರು ಕರೊನಾದಿಂದ ಗುಣಮುಖರಾಗಿದ್ದಾರೆ. 500 ಸಕ್ರಿಯ ಪ್ರಕರಣಗಳಿವೆ. ಜನರು ಮತ್ತಷ್ಟು ಮುಂಜಾಗ್ರತೆ ವಹಿಸಿದರೆ ಮಾತ್ರ ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಣ ಮಾಡಲು ಸಾಧ್ಯ ಎಂದ ಅವರು, ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಯನ್ಸ್ ಕ್ಲಬ್ ಹಾಗೂ ಕೆಎಲ್ಇ ಆಸ್ಪತ್ರೆಯ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಲ್ಇ ಚಾರಿಟೇಬಲ್ ಆಸ್ಪತ್ರೆಗೆ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ನ ಆಡಳಿತಾಧಿಕಾರಿ ಡಾ.ಗಿರೀಶ ಕುಚಿನಾಡ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಡಾ.ನಾಗರಾಜ ಬೈರಿ, ಕರ್ನಾಟಕ ಸರ್ಕಾರದ ಕರೊನಾ ಟಾಸ್ಕ್ಫೋರ್ಸ್ ಅಧ್ಯಕ್ಷ ಡಾ.ಪಿ.ಆರ್.ಎಸ್.ಚೇತನ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ, ಶ್ರೀಕಾಂತ ಮೋರೆ, ಡಾ.ಆರ್.ಎಸ್.ಮುಧೋಳ, ಡಾ.ಅರವಿಂದ ತೇನಗಿ, ಸುಭಾಷ ಹೆಬ್ಬಳ್ಳಿ, ಜುನೇದ ತೋಪಿನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.