ನವದೆಹಲಿ: ಹೆಲ್ಮೆಟ್ ಧರಿಸದ ಯುವಕನೋರ್ವನ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಇದೀಗ ಅಮಾನತು ಗೊಂಡಿದ್ದಾರೆ.
ಉತ್ತರಾಖಂಡದ ಉದ್ಧಾಮ್ ನಗರದಲ್ಲಿ ಘಟನೆ ನಡೆದಿದೆ. ಯುವಕನೋರ್ವ ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಬಂದಿದ್ದನ್ನು ನೋಡಿದ ಪೊಲೀಸ್ ಸಿಬ್ಬಂದಿ ಅವನಿಗೆ ಮೊದಲು ಬೈದಿದ್ದಾರೆ. ಆಗ ಇಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಪೊಲೀಸ್ ಅಧಿಕಾರಿ ಯುವಕನ ಬೈಕ್ನ ಕೀಲಿಯನ್ನು ಕಿತ್ತುಕೊಂಡು ಅವನ ಹಣೆಗೆ ಜೋರಾಗಿ ಇರಿದಿದ್ದಾರೆ. ಇದರಿಂದ ಯುವಕನ ಹಣೆ ಮೇಲೆ ದೊಡ್ಡ ಗಾಯವೇ ಆಗಿ ರಕ್ತ ಸುರಿದಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈ ಯುವಕ ಮತ್ತು ಅವನ ಸ್ನೇಹಿತ ರುದ್ರಪುರ ಮಾರ್ಗವಾಗಿ ಬೈಕ್ನಲ್ಲಿ ಹೋಗುತ್ತಿದ್ದರು. ಅಲ್ಲೇ ಒಂದು ಕಡೆ ಮೂವರು ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಸದ್ಯ ಕೀಲಿಯಿಂದ ಯುವಕನ ಹಣೆಗೆ ಇರಿದ ಪೊಲೀಸ್ನನ್ನು ಅಮಾನತು ಮಾಡಲಾಗಿದೆ ಎಂದು ಸ್ಥಳೀಯ ಎಸ್ಪಿ ತಿಳಿಸಿದ್ದಾರೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣವನ್ನು ತನಿಖೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ, ದೂರು ದಾಖಲಿಸಿದ ರಜಪೂತ್ ತಂದೆ
ಯುವಕ ಸ್ಥಳೀಯನೇ ಆಗಿದ್ದು, ಅಲ್ಲಿನ ಜನರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಸ್ಥಳೀಯ ಎಂಎಲ್ಎ ರಾಜಕುಮಾರ್ ಥುಕ್ರಾಲ್ ಅವರು ಭೇಟಿ ನೀಡಿ, ಅವರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
18 ಜಿಲ್ಲೆಗಳಲ್ಲಿ ನೂರು ದಾಟಿದ ಹೊಸ ಸೋಂಕಿತರ ಪ್ರಮಾಣ; ರಾಜ್ಯದಲ್ಲಿ ಮುಂದುವರಿದ ಕರೊನಾ ಏರುಗತಿ