ರಾಂಚಿ: ಗಣಿಗಾರಿಕೆ ಮಾಫಿಯಾಗೆ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪಾಸಣೆಯ ವೇಳೆ ಪಿಕಪ್ ವಾಹನ ಹರಿಸಿ, ಮಹಿಳಾ ಸಬ್ ಇನ್ಸ್ಪೆಕ್ಟರ್ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಜುಲೈ 20ರಂದು ನಡೆದಿದೆ.
ಬುಧವಾರ ಬೆಳಗ್ಗೆ ನಸುಕಿನ ಜಾವದಲ್ಲಿ ತುಪುದನಾ ಏರಿಯಾದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಂಧ್ಯಾ ತೊಪ್ನೋ ಎಂದು ಗುರುತಿಸಲಾಗಿದೆ. ಡಿಸಿಪಿ ಶ್ರೇಣಿಯ ಹರಿಯಾಣ ಪೊಲೀಸ್ ಅಧಿಕಾರಿ ಸುರೇಂದ್ರ ಸಿಂಗ್ ಅವರು ನುಹ್ ಏರಿಯಾದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋದಾಗ ಅವರ ಮೇಲೆ ಟ್ರಕ್ ಹರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಈ ಘಟನೆ ನಡೆದ ಒಂದು ದಿನದ ಬೆನ್ನಲ್ಲೇ ರಾಂಚಿಯಲ್ಲಿ ಅದೇ ರೀತಿಯ ಘಟನೆ ನಡೆದಿದೆ.
ಸಂಧ್ಯಾ ಅವರ ಮೇಲೆ ಪಿಕಪ್ ವಾಹನ ಹರಿಸಿ, ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ನೆರವಿನಿಂದ ಪೊಲೀಸರು ಬಂಧಿಸಿದ್ದು, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಧ್ಯಾ ಅವರು ತುಪುದುನಾ ಹೊರ ವಲಯದ ಉಸ್ತುವಾರಿ ವಹಿಸಿದ್ದರು ಎಂದು ರಾಂಚಿಯ ಎಸ್ಎಸ್ಪಿ ತಿಳಿಸಿದ್ದಾರೆ.
ಸಂಧ್ಯಾ ಅವರ ಸಾವಿಗೆ ಜಾರ್ಖಂಡ್ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಸಂಧ್ಯಾ ಕುಟುಂಬದಲ್ಲೂ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದೆ.
ಹರಿಯಾಣದ ಸುರೇಂದ್ರ ಸಿಂಗ್ ಅವರು ತಮ್ಮ ತಂಡದೊಂದಿಗೆ ನಿನ್ನೆ (ಜುಲೈ 19) ಬೆಳಗ್ಗೆ 11.30ಕ್ಕೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ನುಹ್ ಏರಿಯಾಗೆ ತಲುಪಿದ್ದರು. ಪೊಲೀಸ್ ಸಿಬ್ಬಂದಿಯನ್ನು ಕಂಡ ಕೂಡಲೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆ ದಾರಿಯಲ್ಲಿ ನಿಂತ ಅಧಿಕಾರಿ ಸುರೇಂದ್ರ ಸಿಂಗ್ ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್ ಚಾಲಕ ಸುರೇಂದ್ರ ಸಿಂಗ್ ಅವರ ಮೇಲೆ ಟ್ರಕ್ ಹರಿಸಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ರಸ್ತೆಯಿಂದ ಪಕ್ಕಕ್ಕೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಘಟನೆ ಬಳಿಕ ಆರೊಪಿಗಳು ಪರಾರಿಯಾಗಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆರೋಪಿಗಳನ್ನು ಪತ್ತೆ ಹಚ್ಚಲು ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಗಣಿಗಾರಿಕೆ ಮಾಫಿಯಾಗೆ ಪೊಲೀಸ್ ಅಧಿಕಾರಿ ಬಲಿ: ಟ್ರಕ್ ಹರಿಸಿ ಡಿಸಿಪಿಯ ಭೀಕರ ಹತ್ಯೆ
ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ