ಲಿಂಗದಹಳ್ಳಿ: ಭದ್ರಾ ಮೇಲ್ದಂಡೆ ಯೋಜನೆಯಿಂದ ತಿಗಡ ಗ್ರಾಪಂ ವ್ಯಾಪ್ತಿಯ ಜಯಪುರ ಗ್ರಾಮದ ವಿವಿಧ ಬೀದಿಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ 42 ಲಕ್ಷ ರೂಪಾಯಿ ಅನುದಾನ ಬಂದಿದ್ದು, ಗ್ರಾಮದ ಎಲ್ಲ ಬೀದಿಗಳಿಗೂ ಕಾಂಕ್ರೀಟ್ ಹಾಕಿ ಅಭಿವೃದ್ಧಿ ಪಡಿಸುವುದಾಗಿ ಸದಸ್ಯ ತಣಿಗೆಬೈಲು ರಮೇಶ್ ಗೋವಿಂದೇಗೌಡ ತಿಳಿಸಿದರು.
ಜಯಪುರ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಜಿ.ಎಚ್.ಶ್ರೀನಿವಾಸ್ 35 ಸಾವಿರ ಲಾನುಭವಿಗಳಗೆ ವಿವಿಧ ಮಾಸಾಶನ ವಿತರಣೆ ಮಾಡಿದರು. ಸಾವಿರಾರು ಮಂದಿಗೆ ನಿವೇಶನ, ವಸತಿ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ನೀರಾವರಿ ಸೌಲಭ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಈಗ ಅವರೇ ಶಾಸಕರಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಜಯಪುರ ಗ್ರಾಮದ ರಸ್ತೆಗಳಿಗೆ ಅನುದಾನ ಒದಗಿಸಿದ್ದಾರೆ ಎಂದು ಹೇಳಿದರು.
ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ವರ್ತೆಗುಂಡಿ, ಮಂಚೇತವರು, ಜಯನಗರ, ಜಯಪುರ, ಮತ್ತು ಕಲ್ಲತ್ತಿಪುರ ಗ್ರಾಮಗಳು ಸೇರಿದ್ದು, ಎಲ್ಲ ಗ್ರಾಮಗಳಿಗೂ ಆದ್ಯತೆ ಮೇಲೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ತಿಗಡ ಗ್ರಾಪಂ ಮಾಜಿ ಸದಸ್ಯ ರಮೇಶ್ ನಾಯ್ಕ, ಭದ್ರಾ ಮೇಲ್ದಂಡೆ ಯೋಜನೆ ಇಂಜಿನಿಯರ್ ಹರೀಶ್, ಗುತ್ತಿಗೆದಾರ ನರಸಿಂಹಮೂರ್ತಿ ಇತರರಿದ್ದರು.