ಜೈಪುರ: ರೆಬಲ್ ನಾಯಕ ಸಚಿನ್ ಪೈಲಟ್ರನ್ನು ರಾಜಸ್ಥಾನ ಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಸ್ಥಾನದಿಂದ ವಜಾಗೊಳಿಸದ ಕಾಂಗ್ರೆಸ್ ಇಂದು ಒಂದು ನೇರ ಸಂದೇಶವನ್ನು ಕಳಿಸಿದೆ.
ಪಕ್ಷದ ಸಭೆಗಳಿಗೆ ಹಾಜರಾಗದೆ, ತಮ್ಮ ಮುನಿಸನ್ನು ಮುಂದುವರಿಸಿರುವ ಸಚಿನ್ ಪೈಲಟ್ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ, ನಾನು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿದ್ದಾರೆ.
ಅದಾದ ಕೆಲವೇ ಹೊತ್ತಿನ ಬಳಿಕ ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೇವಾಲಾ ಅವರು ಮಾತನಾಡಿ, ಸಚಿನ್ ಪೈಲಟ್ ಅವರು ಬಿಜೆಪಿ ಸೇರುವುದಿಲ್ಲ ಎಂದು ಮಾಧ್ಯಮಗಳ ಮೂಲಕ ಕಾಂಗ್ರೆಸ್ಗೆ ತಿಳಿಸಿದ್ದಾರೆ. ಹಾಗಿದ್ದ ಮೇಲೆ ಅವರು ಕಾಂಗ್ರೆಸ್ಗೆ ಎಷ್ಟು ನಿಷ್ಠರು ಎಂಬುದನ್ನು ಸಾರ್ವಜನಿಕವಾಗಿ ತೋರಿಸಲಿ. ಗುರ್ಗಾಂವ್ನ ಹೊಟೆಲ್ನಿಂದ ವಾಪಸ್ ಪಕ್ಷದ ಕಚೇರಿಗೆ ಬರಲಿ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಕ್ ಖಟ್ಟರ್ ಅವರ ಹಿಡಿತದಲ್ಲಿ ಇರುವ ಬದಲು ಇಲ್ಲಿಗೆ ಬರಲಿ ಎಂದು ಹೇಳಿದ್ದಾರೆ.
ಸಚಿನ್ ಪೈಲಟ್ಗೆ ಕಾಂಗ್ರೆಸ್ನಿಂದ ಅಪಾರ ಬೆಂಬಲ ಸಿಕ್ಕಿದೆ. ಅವರನ್ನು ಸಂಸದನಿಂದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಅಲ್ಲಿಂದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನ ಪಟ್ಟ ಸಿಕ್ಕಿತು. ನಂತರ ಡಿಸಿಎಂ ಹುದ್ದೆಯೂ ಸಿಕ್ಕಿತು. ಕಾಂಗ್ರೆಸ್ ಅಥವಾ ಬಿಜೆಪಿಯ ಯಾವುದಾದರೂ ನಾಯಕನಿಗೆ ಅವರ ಹಿರಿಯರಿಂದ ಇಷ್ಟೊಂದು ಬೆಂಬಲ ಸಿಕ್ಕಿದ ಉದಾಹರಣೆಗಳಿದೆಯಾ ಎಂದು ರಣದೀಪ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆಲ್ಕೋಹಾಲ್ ಖರೀದಿಸಲು ಯುವತಿ ಮಾಡಿದ ಉಪಾಯ ಕೇಳಿದ್ರೆ ನೀವು ಬೆರಗಾಗ್ತೀರಾ…!
ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ರಣದೀಪ್ ಅವರು, ನಾವು ಸಚಿನ್ ಪೈಲಟ್ ಹಾಗೂ ಅವರೊಂದಿಗೆ ಇರುವ ಶಾಸಕರಿಗೆ ವಾಪಸ್ ಬರುವಂತೆ ಕರೆಯುತ್ತಲೇ ಇದ್ದೇವೆ. ಅವರಿಗೆ ಯಾವುದೇ ಸಮಸ್ಯೆಯಿದ್ದರೂ ಸರಿಪಡಿಸಲು ಹೈಕಮಾಂಡ್ ಕೂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
20 ಸೆಕೆಂಡ್ನಲ್ಲಿ ಬ್ಯಾಂಕ್ನಿಂದ 10 ಲಕ್ಷ ಎಗರಿಸಿದ ಬಾಲಕ! ಸಿಸಿಟಿವಿಯಲ್ಲಿ ಸೆರೆ