ಶಿವಮೊಗ್ಗ: ಪ್ರತಿಯೊಂದು ಕಾಮಗಾರಿಗೆ ರಾಜ್ಯ ಸರ್ಕಾರ 40 ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಎಂಬ ಆರೋಪ ಮಾಡುವುದು ಕಾಂಗ್ರೆಸ್ಸಿಗರಿಗೆ ಚಟವಾಗಿದ್ದು ದುರ್ಬಲರು ಮಾತ್ರ ಈ ರೀತಿ ಹೇಳಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಂತ್ರಿ ಅಥವಾ ಇಲಾಖೆ ಅಷ್ಟು ಕಮೀಷನ್ ಕೇಳುತ್ತಿದೆ ಎಂದು ಆರೋಪಿಸುವವರು ತಾಕತ್ತಿದ್ದವರು ದಾಖಲೆ ಬಿಡುಗಡೆ ಮಾಡಬೇಕು. ಲೋಕಾಯುಕ್ತ ಅಥವಾ ಮಾಧ್ಯಮಗಳಿಗೆ ದಾಖಲೆ ಕೊಡಲಿ ಎಂದು ಸವಾಲು ಹಾಕಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಬಿಟ್ಟು ಬೇರೇನೂ ಮಾತನಾಡುವುದಿಲ್ಲ. ಅವರಿಗೆ ರಾತ್ರಿ ಕನಸಿನಲ್ಲೂ ಬಿಜೆಪಿಯೇ ಬರುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಪಕ್ಷವಾಗಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ಸೋತು ಪ್ರತಿಪಕ್ಷ ಸ್ಥಾನದಲ್ಲಿ ಕೂಡ ಇರುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಜೆಡಿಎಸ್ ಪಂಚರಥ ಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ವೊಂದು ರಾಜಕೀಯ ಪಕ್ಷ. ಅವರ ಬಗ್ಗೆ ಮಾತನಾಡಲು ನಾನ್ಯಾರು ?, ಮುಂದಿನ ಸಿಎಂ ನಾನೇ ಅಂತಾ ಹೇಳಿಕೊಳ್ಳಲಿ, ಮುಂದಿನ ಪ್ರಧಾನಿ ನಾನೇ ಅಂತಾ ಹೇಳಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಜನ ಬೆಂಬಲ ಕೊಡಬೇಕು ಅಷ್ಟೇ ಎಂದರು.
ಮುಸ್ಲಿಂ ಗೂಂಡಾಗಳಿಗೆ ಶಕ್ತಿ ಕೊಟ್ಟಿದ್ದೆ ಕಾಂಗ್ರೆಸ್
ಶಿವಮೊಗ್ಗದಲ್ಲಿ ಪದೇ ಪದೇ ಗಲಾಟೆಗೆ ಈಶ್ವರಪ್ಪ ಕಾರಣ. ಉದ್ಯಮಿಗಳು ಹೂಡಿಕೆ ಹೂಡಲು ಬರುತ್ತಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಕಿಡಿಕಾರಿದ ಈಶ್ವರಪ್ಪ, ಒಂದು ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಕನಕಪುರಕ್ಕೆ ಎಷ್ಟು ಸಾವಿರ ಕೋಟಿ ರೂ. ತಂದಿದ್ದಾರೆ ಎಂದು ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಕಾಂಗ್ರೆಸ್ನವರು. ಮುಸಲ್ಮಾನ್ ಗೂಂಡಾಗಳಿಗೆ ಶಕ್ತಿ ಇರಲಿಲ್ಲ. ಅವರಿಗೆ ಶಕ್ತಿ ಕೊಟ್ಟವರೇ ಕಾಂಗ್ರೆಸ್ನವರು. ಜೈಲಿನಲ್ಲಿ ಇದ್ದವರನ್ನೆಲ್ಲಾ ಕೇಸ್ ವಾಪಸ್ ತೆಗೆಸಿ ಎಲ್ಲ ಮುಸಲ್ಮಾನ ಗೂಂಡಾಗಳು ರಸ್ತೆಗೆ ಬರಲು ಇದೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.