ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾನು ಶುಭಕೋರುತ್ತೇನೆ. ಅವರು ನೂರು ವರ್ಷಕ್ಕೂ ಅಧಿಕ ವರ್ಷ ಬಾಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಬಿಎಸ್ವೈಗೆ ಹಾರೈಸಿದರು.
ಸಿಎಂ ಬಿಎಸ್ವೈ 78ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಮಾತನಾಡಿದರು.
ರಾಜಕೀಯ ಬೇರೆ, ಮಾನವ ಸಂಬಂಧವೇ ಬೇರೆ. ಹೀಗಾಗಿ ನಾನು ಒಪ್ಪಿಕೊಂಡು ಅಭಿನಂದನಾ ಸಮಾರಂಭಕ್ಕೆ ಬಂದೆ. ನಾನು ಎಷ್ಟು ವಿರೋಧ ಮಾಡಿದರೂ ಮನುಷ್ಯ ಸಂಬಂಧಕ್ಕೆ ಧಕ್ಕೆ ಬರಬಾರದು. ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿ ಮತ್ತು ಬಿಎಸ್ವೈ ಸಿದ್ಧಾಂತವೇ ಬೇರೆಯಾಗಿದೆ. ಆದರೆ, ನಾವು ಜನರ ಮುಂದೆ ನಮ್ಮ ಸಿದ್ಧಾಂತ ಇಡುತ್ತೇವೆ. ಕೊನೆಗೆ ಜನರೇ ಸಿದ್ಧಾಂತವನ್ನು ಆಯ್ಕೆ ಮಾಡ್ತಾರೆ ಎಂದರು.
ರಾಜಕೀಯ ಜೀವನದಲ್ಲಿ ವೈಯಕ್ತಿಕ ಸಂಬಂಧಗಳು ಅಡ್ಡಿ ಬರಬಾರದು. ನಾನು ಹೃದಯಪೂರ್ವಕವಾಗಿ ಬಿಎಸ್ವೈಗೆ ಶುಭಾಶಯ ಕೋರುತ್ತೇನೆ. ಅವರು ನೂರು ವರ್ಷಕ್ಕೂ ಅಧಿಕ ವರ್ಷ ಬಾಳಲಿ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಎಷ್ಟು ವರ್ಷ ಕ್ರೀಯಾಶೀಲನಾಗಿ ಬದುಕಿದ ಎಂಬುದು ಮುಖ್ಯ ಎಂದು ತಿಳಿಸಿದರು.
ಬಿಎಸ್ವೈ ನೇರವಾಗಿ ಸಿಎಂ ಸ್ಥಾನಕ್ಕೆ ಬರಲಿಲ್ಲ, ಅವರು ಸಾಮಾನ್ಯ ಕುಟುಂಬದಿಂದ ಬಂದು, ಸ್ವಂತ ಪರಿಶ್ರಮ, ಹೋರಾಟದಿಂದ ಸಿಎಂ ಆದವರು. ಹೋರಾಟ ಬದುಕಿನಿಂದ ಬಂದವರಿಗೆ ಜನರ ಬದುಕು ಅರ್ಥ ಆಗುತ್ತದೆ. ರಾಜ್ಯದ ರಾಜಕೀಯ ಅರ್ಥ ಮಾಡಿಕೊಂಡವರಲ್ಲಿ ಕೆಲವೇ ಕೆಲವು ರಾಜ್ಯಕಾರಣಿಗಳಲ್ಲಿ ಬಿಎಸ್ವೈ ಒಬ್ಬರು. ಸಿಎಂ ಆದವರಿಗೆ ಒತ್ತಡಗಳು ಇರೋದು ಸಹಜ. ಒತ್ತಡ ಸಹಿಸಿಕೊಳ್ಳುವ ಶಕ್ತಿ ಬಿಎಸ್ವೈ ಅವರಿಗೆ ಬರಲಿ ಎಂದರು. (ದಿಗ್ವಿಜಯ ನ್ಯೂಸ್)