ಬೆಳಗಾವಿ: ಹೊಸದಾಗಿ ಮೇಲ್ದರ್ಜೆಗೇರಿಸಿರುವ ಪಟ್ಟಣ ಪಂಚಾಯಿತಿ, ಪುರಸಭೆಯಲ್ಲಿ ಸೇವೆ ಮುಂದುವರಿಸಿರುವ ಕಾರ್ಮಿಕರನ್ನು ಪೌರಸೇವಾ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ನಗರ ಸ್ಥಳೀಯ ಸಂಸ್ಥೆಗಳ ರಾಜ್ಯ ನೌಕರ ಸಂಘ ಶುಕ್ರವಾರ ಪ್ರತಿಭಟನೆ ನಡೆಸಿತು. ಬಳಿಕ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಪೌರಾಡಳಿತ ನಿರ್ದೇಶನಾಲಯ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹೊಸದಾಗಿ ಮೇಲ್ದರ್ಜೆಗೇರಿಸಿರುವ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನೂ ಹಳೆಯ ಕಾರ್ಮಿಕರೇ ಮುಂದುವರಿದಿದ್ದಾರೆ. ಇದರಲ್ಲಿ ಕೆಲವರನ್ನು ಪೌರ ಕಾರ್ಮಿಕರೆಂದು ಪರಿಗಣಿಸಿ ವೇತನ, ಇತರ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಉಳಿದ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಈ ಕುರಿತು ಪರಿಶೀಲಿಸಿ, ಸೇವೆಯಲ್ಲಿರುವ ಕಾರ್ಮಿಕರನ್ನು ಪೌರಸೇವಾ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು. ನಾಗರಾಜ ಬಳ್ಳಾರಿ, ಪಾಂಡು ಕಾಂಬಳೆ, ಹನುಮಂತ ಕಾಂಬಳೆ, ಅನಿಲ ನಡುವಿನಕೆರಿ, ನರಸಿಂಹ ಬಳ್ಳಾರಿ, ದುಂಡಪ್ಪ ಪಡಗೋದಿ ಇತರರಿದ್ದರು.