ಕೋಲ್ಕತ್ತ: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದೇಬೇಂದ್ರನಾಥ್ ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಶ್ಚಿಮ ಬಂಗಾಳ ಸಿಐಡಿ ಇಂದು ಓರ್ವನನ್ನು ಬಂಧಿಸಿದೆ.
ದೇಬೇಂದ್ರನಾಥ್ ರಾಯ್ ಅವರು ಎರಡು ದಿನಗಳ ಹಿಂದೆ ಉತ್ತರ ದಿನಜ್ಪುರ ಜಿಲ್ಲೆಯ ತಮ್ಮ ನಿವಾಸದ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಮ್ಟಾಬಾದ್ ಶಾಸಕ ದೇಬೇಂದ್ರನಾಥ್ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ನಿಲಯ್ ಸಿನ್ಹಾ ಎಂಬುವನ ಹೆಸರು ಇತ್ತು. ಈ ನಿಲಯ್ ಸಿನ್ಹಾನನ್ನು ಮಾಲ್ಡಾದ ಇಂಗ್ಲಿಷ್ ಬಜಾರ್ ಬಳಿ ಸ್ಥಳೀಯ ಪೊಲೀಸರು ಬಂಧಿಸಿ, ಸಿಐಡಿ ವಶಕ್ಕೆ ನೀಡಿದ್ದಾರೆ. ಈತನನ್ನು ಇಂದು ಸಿಐಡಿ ಅಧಿಕೃತವಾಗಿ ಬಂಧಿಸಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ರೇ ಪೋಸ್ಟ್ಮಾರ್ಟಮ್ ರಿಪೋರ್ಟ್ ಹೇಳಿದ್ದೇನು?
ಡೆತ್ನೋಟ್ನಲ್ಲಿ ಮಹಬುದ್ ಅಲಿ ಎಂಬ ಇನ್ನೊಂದು ಹೆಸರಿದ್ದು, ಆತನಿಗಾಗಿ ಸಿಐಡಿ ಹುಡುಕುತ್ತಿದೆ. ಹಾಗೇ, ಸೆರೆ ಸಿಕ್ಕ ನಿಲಯ್ ಸಿಂಗ್ನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇಬೇಂದ್ರನಾಥ್ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಇನ್ನೂ ಗೊಂದಲದ ವಿಚಾರವಾಗಿದೆ. ಅವರ ಜೇಬಿನಲ್ಲಿ ಸಣ್ಣ ಚೀಟಿಯೊಂದು ಸಿಕ್ಕಿದ್ದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. (ಏಜೆನ್ಸೀಸ್)