ಚಿತ್ತಾಪುರ: ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಒತ್ತಾಯಿಸಿದರು.
ಬಸವೇಶ್ವರ ಮೂರ್ತಿ ಎದುರು ಬಿಜೆಪಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಹಲಕರ್ಟಿಯಲ್ಲಿ ದುಷ್ಕರ್ಮಿಗಳು ಬಸವೇಶ್ವರ ಭಾವಚಿತ್ರವನ್ನು ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ. ಆದರೆ ಇಲ್ಲಿವರೆಗೂ ಕಾಂಗ್ರೆಸ್ನ ಯಾವೊಬ್ಬ ನಾಯಕರು ಧ್ವನಿ ಎತ್ತಿಲ್ಲ. ಲಿಂಗಾಯಿತರ ಮತ ಪಡೆದುಕೊಂಡವರೂ ಬಸವೇಶ್ವರ ಭಾವಚಿತ್ರಕ್ಕೆ ಅವಮಾನವಾದರೂ ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಚಂದಾ ವಸೂಲಿ ಮಾಡಿ ಬಸವ ಜಯಂತಿ, ಉಚಿತ ಸಾಮೂಹಿಕ ಮದುವೆ ಮಾಡಲು ಮುಂದಾಗುತ್ತೀರಿ. ಇದೀಗ ನಮ್ಮೆಲ್ಲರ ಆದರ್ಶ ವ್ಯಕ್ತಿ ಬಸವಣ್ಣನಿಗೆ ಅಪಮಾನವಾಗಿದೆ, ನಾಗರೆಡ್ಡಿ ಪಾಟೀಲ್ ಕರದಾಳ ಅವರೇ ಇದೀಗ ನೀವೇಕೆ ಮೌನ ವಹಿಸಿದ್ದೀರಿ ? ೨೪ ಗಂಟಯೊಳಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಚಿತ್ತಾಪುರ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಂಗಾಯತರ ಕಡೆಗಡಣೆಯಾಗುತ್ತಿದೆ. ಅಲ್ಲದೆ ಮಹಾನ್ ವ್ಯಕ್ತಿಗಳ ಮೂರ್ತಿ ಹಾಗೂ ಭಾವಚಿತ್ರಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್, ಮುಖಂಡರಾದ ಸುರೇಶ ಬೆನಕನಳ್ಳಿ, ದೇವೇಂದ್ರ ಕರದಾಳ, ನಾಗರಾಜ ಭಂಕಲಗಿ, ನಾಗರಾಜ ಹೂಗಾರ, ಅಯ್ಯಪ್ಪ ರಾಮತೀರ್ಥ ಮಾತನಾಡಿದರು.
ತಹಸೀಲ್ದಾರ್ ಸೈಯ್ಯದ್ ಷಾಷಾವಲಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ಮಲ್ಲಿಕಾರ್ಜುನ ಎಮ್ಮೇನೂರ, ವಿಠ್ಠಲ್ ನಾಯಕ್, ಸೋಮಶೇಖರ ಪಾಟೀಲ್ ಬೆಳಗುಂಪಾ, ಭೀಮರೆಡ್ಡಿಗೌಡ ಕುರಾಳ, ನಾಗೂಬಾಯಿ ಜಿತುರೆ, ವೀರಣ್ಣ ಯಾರಿ, ಅಕ್ಕಮಹಾದೇವಿ, ಆನಂದ ಪಾಟೀಲ್ ನರಬೋಳ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಮನಿ, ಅಶೋಕ ನಿಪ್ಪಾಣಿ, ಅಶ್ವತ್ಥ ರಾಠೋಡ್, ವಿಜಯಕುಮಾರ ಗುಂಡಗುರ್ತಿ, ಮಹ್ಮದ್ ಯೂನುಸ್, ರಾಮದಾಸ್ ಚವ್ಹಾಣ್, ಮಹಿಪಾಲ್ ಮೂಲಿಮನಿ, ಶ್ರೀಕಾಂತ ಸುಲೇಗಾಂವ್, ಕೋಟೇಶ್ವರ ರೇಶ್ಮಿ, ಮಲ್ಲಿಕಾರ್ಜುನ ಪೂಜಾರಿ, ಚಂದ್ರು ಕಾಳಗಿ, ಬಾಲಾಜಿ ಬುರಬುರೆ, ಮಹೇಶ ಬಾಳಿ, ಅಂಬು ಹೋಳಿಕಟ್ಟಿ, ಮಹೇಂದ್ರ ಕೋರಿ ಇತರರಿದ್ದರು.