ಚಿತ್ರದುರ್ಗ: ಜಿಲ್ಲಾ ಸಂಚಾರಿ ಶಸ್ತ್ರ ಚಿಕಿತ್ಸಾ ಘಟಕ ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಸಂಯಕ್ತಾಶ್ರಯದಲ್ಲಿ ಜ.9ರಂದು ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಜಿಲ್ಲಾಸ್ಪತ್ರೆ ನೇತ್ರ ಚಿಕಿತ್ಸಾ ವಿಭಾಗದ ಕೊಠಡಿ ಸಂಖ್ಯೆ 51 ರಲ್ಲಿ ಬೆಳಗ್ಗೆ 10 ಗಂಟೆಯಿಂದ ತಪಾಸಣೆ ನಡೆಯಲಿದೆ. ಹಿರಿಯ ನೇತ್ರ ತಜ್ಞ ಡಾ.ಆರ್.ಕೃಷ್ಣಮೂರ್ತಿ, ಡಾ.ಐ.ಎಂ ಶಿಲ್ಪಾ, ಡಾ.ಸಂದೀಪ್, ಡಾ.ಪ್ರದೀಪ್ ಉಚಿತ ತಪಾಸಣಾ ಶಿಬಿರ ನಡೆಸುತ್ತಾರೆ.
ಕಣ್ಣಿನ ಪೊರೆಯಿರುವ (ಕ್ಯಾಟರಾಕ್ಟ್) ಅರ್ಹ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಐಓಎಲ್ ಅಳವಡಿಸಲಾಗುತ್ತದೆ. ಆಸಕ್ತರು ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ, ತಟ್ಟೆ, ಲೋಟ ಹೊದಿಕೆಯೊಂದಿಗೆ, ಪುರುಷರು ಮುಖ ಕ್ಷೌರ ಮಾಡಿಸಿಕೊಂಡು ಬರಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಜೆ ಬಸವರಾಜು ತಿಳಿಸಿದ್ದಾರೆ.