ಚಿತ್ರದುರ್ಗ: ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 1ರಿಂದ 10 ತರಗತಿ ವರೆಗೆ ಎಲ್ಲ ಶಾಲೆಗಳಿಗೆ ಮಾ.14ರಿಂದ ಜಾರಿಗೆ ಬರುವಂತೆ ಬೇಸಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆ ಎಲ್ಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಈ ಆದೇಶವನ್ನು ಪಾಲಿಸಬೇಕೆಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ತಿಳಿಸಿದ್ದಾರೆ.
ಪರೀಕ್ಷೆಗಳು ನಡೆಯುತ್ತಿದ್ದರೂ ಸ್ಥಗಿತಗೊಳಿಸಿ ರಜೆ ಘೋಷಿಸಬೇಕು. ವಿದ್ಯಾರ್ಥಿಗಳು 2019-20ನೇ ಶೈಕ್ಷಣಿಕ ಸಾಲಿನ ಮಾ.13ರ ವರೆಗೆ ನಡೆದ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಶ್ರೇಣೀಕೃತ ಫಲಿತಾಂಶದೊಂದಿಗೆ ಮುಂದಿನ ತರಗತಿಗೆ ಬಡ್ತಿ ಕೊಡಬೇಕು.
7ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾ.14ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸಿ,ಪರೀಕ್ಷಾ ದಿನದಂದು ಹಾಜರಾಗಲು ತಿಳಿಸಬೇಕು. 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.23ರೊಳಗೆ ಕಡ್ಡಾಯವಾಗಿ ಪರೀಕ್ಷೆ ಪೂರ್ಣಗೊಳಿಸಿ ರಜೆ ಘೋಷಿಸಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಬೇಕು.
ಸುರಕ್ಷತಾ ಕ್ರಮಕ್ಕಾಗಿ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು. ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಆಯಾ ಶಾಲಾ ಮುಖ್ಯಸ್ಥರು ಕೈಗೊಳ್ಳಬೇಕು. ರಜೆ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳನ್ನು ಆರಂಭಿಸಬೇಕು ಎಂದು ಸೂಚಿಸಿದ್ದಾರೆ.