ಚಿತ್ರದುರ್ಗ: ಕೇಂದ್ರ ಸರ್ಕಾರ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿ ದೇಶಾದ್ಯಂತ ಜ.8ರಂದು ನಡೆಸುತ್ತಿರುವ ಭಾರತ್ ಬಂದ್ ಬೆಂಬಲಿಸುವಂತೆ ಸಾರ್ವಜನಿಕರು, ವರ್ತಕರಿಗೆ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮನವಿ ಮಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಗಳು ಈಡೇರಿಲ್ಲ. ಬಿಜೆಪಿ ಗೆಲುವಿನಿಂದಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಜೀವನ ಅತಂತ್ರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ನಿರುದ್ಯೋಗ ಹೆಚ್ಚಾಗುತ್ತಿದೆ. ಆದ್ದರಿಂದ ಜನರಲ್ಲಿ ಈ ಎಲ್ಲ ಸಮಸ್ಯೆಗಳೆಡೆ ಜಾಗೃತಿ ಮೂಡಿಸಲು ಬಂದ್ಗೆ ಕರೆ ನೀಡಲಾಗಿದೆ ಎಂದರು.
ಎಐಟಿಯುಸಿ ಮುಖಂಡ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ 10 ಕಾರ್ಮಿಕ ಹಾಗೂ ಹಲವು ರೈತ ಸಂಘಟನೆಗಳೊಂದಿಗೆ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಸಂಘಟನೆ ಮುಖಂಡರಾದ ಸಿ.ಕೆ.ಗೌಸ್ಪೀರ್, ಟಿ.ಶಫಿವುಲ್ಲಾ, ಸುಜಾತಾ, ರವಿಕುಮಾರ್, ಜಿ.ಸಿ.ಸುರೇಶ್ಬಾಬು, ಟಿ.ಆರ್.ಉಮಾಪತಿ, ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಧನಂಜಯ, ಲಿಂಗರಾಜು ಇತರರಿದ್ದರು.