ಚಿತ್ರದುರ್ಗ: ಮಹಾಮಾರಿ ಕರೊನಾ ಹಿಮ್ಮೆಟ್ಟಿಸಲು ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಲಾಹಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಹಮದ್ ನಿಜಾಮುದ್ದಿನ್ ಮನವಿ ಮಾಡಿದರು.
ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಸೊಸೈಟಿ ಆವರಣದಲ್ಲಿ ಸೋಮವಾರ ಷೇರುದಾರರಿಗೆ ಆಹಾರದ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ಕರೊನಾ ವೈರಾಣು ಜಗತ್ತನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ಶ್ರಮಿಸುತ್ತಿದ್ದಾರೆ. ಅಲ್ಲಿಯವರೆಗೆ ಮನೆಯಲ್ಲಿದ್ದರೆ ಜೀವ ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅನಗತ್ಯ ಓಡಾಟಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಜತೆಗೆ ಪೊಲೀಸರು, ವೈದ್ಯರು ಸೇರಿ ಸರ್ಕಾರ ಸೂಚಿಸುವ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರೊನಾ ವೈರಸ್ ನಿಯಂತ್ರಣಕ್ಕೆ ವೈದ್ಯರು, ಪೊಲೀಸರು ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವರ್ಗದ ಜನರಿಗೆ ನೆರವು ಜತೆಗೆ ಮುಖ್ಯವಾಗಿ ಸಹಕಾರ ನೀಡಬೇಕು. ಸಂಕಷ್ಟದ ಸಮಯದಲ್ಲಿ ಭಾರತೀಯರೆಲ್ಲರೂ ಒಗ್ಗೂಡಿ ಕರೊನಾ ಹಿಮ್ಮೆಟ್ಟಿಸಲು ಮುಂದಾಗಬೇಕು ಎಂದು ಹೇಳಿದರು.