ಚಿತ್ರದುರ್ಗ: ಪ್ರತ್ಯಕ್ಷ ಹಾಗೂ ಪರೋಕ್ಷ ಗಣಿಗಾರಿಕೆ ಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 147.23 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಶುಕ್ರವಾರ ಒಪ್ಪಿಗೆ ನೀಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಶುಕ್ರವಾರ ನಡೆದ ಖನಿಜ ಪ್ರತಿಷ್ಠಾನ ಸಮಿತಿ ಸಭೆ ಅನುಮೋದನೆ ನೀಡಿತು.
ನೇರ ಬಾಧಿತ ಹಾಗೂ ಪರೋಕ್ಷ ಬಾಧಿತ ಪ್ರದೇಶಗಳಿಗೆ ಶೇ.50ರಷ್ಟು ಹಂಚಿಕೆಯಂತೆ ಹೊಳಲ್ಕೆರೆ, ಚಿತ್ರದುರ್ಗಕ್ಕೆ ಹೆಚ್ಚಿನ ಅನುದಾನ ಕೊಡಲಾಗಿದೆ.
ಸಂಗ್ರಹವಾದ ನಿಧಿಯಲ್ಲಿ 60:40 ಅನುಪಾತದಡಿ ಶೇ.60ನ್ನು ಶಿಕ್ಷಣ, ಆರೋಗ್ಯ,ಪರಿಸರ ಸಂರಕ್ಷಣೆಗೆ ಉಳಿದ 40ನ್ನು ಮೂಲ ಸೌಕರ್ಯಗಳಿಗೆ ಬಳಸಬಹುದು.
ವಾರದೊಳಗೆ ತಮ್ಮ ಕ್ಷೇತ್ರದ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲು ಶಾಸಕರುಗಳಿಗೆ ತಿಳಿಸಲಾಗಿದೆ.
ಈ ಹಿಂದೆ ಪ್ರತಿಷ್ಠಾನದ ಸರ್ಕಾರೇತರ ಸದಸ್ಯರ ಸದಸತ್ವ ರದ್ದುಪಡಿಸಿ ಹೊಸ ನಾಮ ನಿರ್ದೇಶನಕ್ಕೆ ಸಭೆ ನಿರ್ಧರಿಸಲಾಗಿದೆ.
ಕೋವಿಡ್-19 ಆಸ್ಪತ್ರೆಗೆ ಡಿಎಂಎಫ್ ನಿಧಿಯಿಂದ 23.55 ಕೋಟಿ.ರೂ ಬಳಸಿಕೊಳ್ಳಲು ಸಮಿತಿ ನಿರ್ಧರಿಸಿದೆ.
ಚಿತ್ರದುರ್ಗ ನೇರ ಹಾಗೂ ಪರೋಕ್ಷ ಬಾಧಿತ ಪ್ರದೇಶವಾದ ಕಾರಣ ಹೆಚ್ಚಿನ ಅನುದಾನ ಮಂಜೂರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾಡಿದ ಮನವಿಗೆ ಸಚಿವರು ಸಮ್ಮತಿಸಿದರು.
ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ,ಡಿಸಿ ಆರ್.ವಿನೋತ್ಪ್ರಿಯಾ, ಜಿಪಂ ಸಿಇಒ ಎಸ್.ಹೊನ್ನಾಂಬ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಲಿಂಗರಾಜ್ ಮತ್ತಿತರ ಇಲಾಖೆ ಹಿರಿಯ ಅಧಿಕಾರಿಗಳಿದ್ದರು.