ಚಿತ್ರದುರ್ಗ: ಜಿಲ್ಲೆಗೆ ಬಂದಂಥ ಯಾವುದೇ ಅನುದಾನ ಸರ್ಕಾರಕ್ಕೆ ಹಿಂತಿರುಗಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜಾರಿ ಖಚಿತ ಎಂದು ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಎಚ್ಚರಿಸಿದರು.
ಬುಧವಾರ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ ಅನುದಾನ ಬಳಕೆಯಲ್ಲಿ ವಿಳಂಬ ಮಾಡಿರುವ ನಾನಾ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರ್ಚ್ ಅಂತ್ಯದೊಳಗೆ ಎಲ್ಲ ಅನುದಾನ ಖರ್ಚಾಗಬೇಕು ಎಂದು ಸೂಚಿಸಿದರು.
ಈಗಾಗಲೇ ಶಿಸ್ತು ಕ್ರಮಕ್ಕೆ ಶಿಫಾರಾಸು ಆಗಿರುವ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಅವರನ್ನು ಅಧ್ಯಕ್ಷರು ಹಾಗೂ ಪ್ರಭಾರ ಸಿಇಒ ವಿನೋತ್ ಪ್ರಿಯಾ ತರಾಟೆಗೆ ತೆಗೆದುಕೊಂಡರು.
ಈ ಇಲಾಖೆ ಕುರಿತು ಪ್ರತ್ಯೇಕ ಪರಿಶೀಲನೆ ಮಾಡುವುದಾಗಿ ವಿನೋತ್ ಪ್ರಿಯಾ ಹೇಳಿದರು.
ಟೆಂಡರ್ ಕುರಿತಂತೆ ನೀಡಿದ ನಾಗರಾಜ್ ಮಾಹಿತಿಗೆ, ಸಿಇಒ ಓಂಕಾರಪ್ಪ ಗರಂ ಆದರು. ಸಭೆಯನ್ನು ಯಾಕೆ ಮೀಸ್ಲೀಡ್ ಮಾಡುತ್ತಿದ್ದೀರಿ ಎಂದು ಹರಿಹಾಯ್ದರು.
ಪ್ರತಿ ತಿಂಗಳು ನಿಮ್ಮದು ಇದೇ ರೋಧನೆ ಆಯಿತೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.
ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಶೀಘ್ರ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ರಜೆ ಕೊಡಬೇಕು, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಅತ್ಯಂತ ಸುಧಾರಣೆ ಕಂಡು ಬರಬೇಕೆಂಬ ಅಧ್ಯಕ್ಷರ ಆಶಯಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಕಳೆದ ವರ್ಷ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನ ಪಡೆದಿದೆ. ಈ ಬಾರಿ ಮೊದಲ ಸ್ಥಾನಕ್ಕೆ ಪ್ರಯತ್ನಿಸಲಾಗಿದೆ ಎಂದರು.
ಜಿಲ್ಲೆ ಎಲ್ಲ ಸರ್ಕಾರಿ ಆಸ್ಪತ್ರೆ ವೈದ್ಯರು, ಔಷಧ ತರುವಂತೆ ಚೀಟಿ ಬರೆದುಕೊಡುತ್ತಿದ್ದಾರೆಂಬ ದೂರು ಸಭೆಯಲ್ಲಿ ಚರ್ಚೆಗೆ ಬಂತು. ಜನೌಷಧ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಲಭ್ಯ ಔಷಧ ಪಟ್ಟಿ ಪ್ರದರ್ಶಿಸಬೇಕು ಡಿಎಚ್ಒ ಡಾ.ಸಿ.ಎಲ್.ಫಾಲಾಕ್ಷಗೆ ಸಿಇಒ ಸೂಚಿಸಿದರು.
ಬಿಎಸ್ 6 ಮಾದರಿ ತ್ರಿಚಕ್ರ ವಾಹನ ಖರೀದಿಗೆ ಹೊಸ ಟೆಂಡರ್ ಕರೆಯುವಂತೆ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ ವೈಶಾಲಿ ಅವರಿಗೆ ಅಧ್ಯಕ್ಷರು ತಿಳಿಸಿದರು.
ಜಿಲ್ಲೆಯ ರೈತರಿಗೆ ಮೀನು ಕೃಷಿ ಕುರಿತಂತೆ ಜಾಗೃತಿ ಮೂಡಿಸಬೇಕೆಂದು ಶಿವಮೂರ್ತಿ ಸಲಹೆ ನೀಡಿದರು.
ತಮ್ಮ ಕರೆಗೂ ಸ್ಪಂದಿಸದ ಬೆಸ್ಕಾಂ ಅಧಿಕಾರಿಗಳ ನಡೆಗೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಬಯೋ ಮೆಟ್ರಿಕ್ ಕಡ್ಡಾಯವೆಂದು ಸಿಇಒ ಹೇಳಿದರು. ಮುಖ್ಯಯೋಜನಾಧಿಕಾರಿ ಶಶಿಧರ್ ಮತ್ತಿತರ ಅಧಿಕಾರಿಗಳಿದ್ದರು.