ಚಿತ್ರದುರ್ಗ: ಏ.24 ರಿಂದ ಆರಂಭವಾಗಲಿರುವ ರಂಜಾನ್ ಮಾಸದ ಪ್ರಾರ್ಥನೆಗಳನ್ನು ಮನೆಗಳಲ್ಲೇ ಮಾಡಬೇಕೆಂದು ಡಿಸಿ ಆರ್.ವಿನೋತ್ ಪ್ರಿಯಾ ಆದೇಶಿಸಿದ್ದಾರೆ.
ಮಸೀದಿಗಳಲ್ಲಿ ಪೇಶ್ಇಮಾಮ್, ಮೌಝಿನ್ ಮತ್ತು ಸಿಬ್ಬಂದಿ ಸಾರ್ವಜನಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರವಚನ ಆಯೋಜಿಸುವಂತಿಲ್ಲ. ಕಡಿಮೆ ಡೆಸಿಬಲ್ನಲ್ಲಿ ಧ್ವನಿವರ್ಧಕದ ಮೂಲಕ ಆಜಾನ್ ನೀಡುವುದು. ಸಹರಿ ಮತ್ತು ಇಫ್ತಾರ್ ಸಮಯವನ್ನು ಜನರಿಗೆ ಧ್ವನಿವರ್ಧಕದ ಧ್ವನಿ ಕಡಿಮೆಗೊಳಿಸಿ ತಿಳಿಸಬೇಕು. ಜಿಲ್ಲೆಯಲ್ಲಿ ಇಫ್ತಾರ್ ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ.
ಸಹರಿ ಮತ್ತು ಇಫ್ತಾರ್ ಮನೆಗಳಲ್ಲೇ ನಿರ್ವಹಿಸಬೇಕು. ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಯಾವುದೇ ತಿಂಡಿ ತಿನಿಸು ತಯಾರಿಸುವಂತಿಲ್ಲ ಹಾಗೂ ವಿತರಿಸುವಂತಿಲ್ಲ. ಮಸೀದಿ ದರ್ಗಾಗಳ ಸುತ್ತಮುತ್ತ ಉಪಾಹಾರ ಅಂಗಡಿ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.