ಚಿತ್ರದುರ್ಗ: ಬೆಂಕಿ ಆಕಸ್ಮಿಕದಲ್ಲಿ ಬಾಲಕಿ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಗರದ ಗಾರೆಹಟ್ಟಿಯ ಮುಖ್ಯರಸ್ತೆಯಲ್ಲಿ ಗುರುವಾರ ಬೆಳಗ್ಗೆ 7.30ರ ಹೊತ್ತಿನಲ್ಲಿ ನಡೆದಿದೆ.
ಹಿರಿಯೂರು ತಾಲೂಕು ತಾಳವಟ್ಟಿ ಗ್ರಾಮದ ಅರುಣ್ ಕುಮಾರ್ (40), ಪತ್ನಿ ಲತಾ, ಪುತ್ರಿ ಅಮೃತಾ (13) ಮೃತರು.
ಈ ದಂಪತಿ ಪುತ್ರಿಯೊಂದಿಗೆ 2 ತಿಂಗಳಿಂದೀಚೆಗೆ ಗಾರೆಹಟ್ಟಿ ಈಶ್ವರಪ್ಪರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಅರುಣ್ಕುಮಾರ್ ಖಾಸಗಿ ಬಸ್ ಏಜೆಂಟ್ ಹಾಗೂ ಲತಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದರು.
ಮನೆಯಲ್ಲಿದ್ದ ಲತಾ ತಾಯಿ ಪದ್ಮಾ ಬೆಳಗ್ಗೆ ವಾಕಿಂಗ್ ಹೋಗಿದ್ದರು. ಈ ವೇಳೆ ಬೆಂಕಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅವಘಡಕ್ಕೆ ಅಡುಗೆ ಅನಿಲ ಸೋರಿಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಬೆಂಕಿಗೆ ಅನಿಲ ಅಥವಾ ವಿದ್ಯುತ್ ಕಾರಣವೆ ಎಂಬುದನ್ನು ಅಗ್ನಿಶಾಮಕ ದಳ ಹಾಗೂ ಬೆಸ್ಕಾಂ ಅಧಿಕಾರಿಗಳು ಖಚಿತ ಪಡಿಸ ಬೇಕಿದೆ.
ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಲತಾಳ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಕೋಟೆ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ ಎಂದು ಎಸ್ಪಿ ಹೇಳಿದರು.
ವೈಎಸ್ಪಿ ಎಸ್.ಪಾಂಡುರಂಗ, ದಾವಣಗೆರೆ ಅಗ್ನಿಶಾಮಕ ದಳದ ಪ್ರಾದೇಶಿಕ ಬಿ.ಜಯರಾಮ್, ಅಧಿಕಾರಿ ಶಶಿಧರ್ ನಿಲೇಗಾರ್, ಕೋಟೆ ಪಿಐ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.