ಚಿಕ್ಕಮಗಳೂರು: ಇಳಿವಯಸ್ಸಿನಲ್ಲೂ ಪ್ರತಿದಿನ ಬಿಸಿಲು, ಮಳೆ ಎನ್ನದೆ ಸುಮಾರು 40 ಕಿ.ಮೀ ಸೈಕಲ್ ತುಳಿಯುವ ಇವರ ಉತ್ಸಾಹ ಯುವಕರನ್ನು ನಾಚಿಸುವಂತಿದೆ. ಅದು ಕೂಡ ಇವರ ಸೈಕಲ್ ಸವಾರಿ ಆರಂಭವಾಗಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 35 ವರ್ಷಗಳ ಹಿಂದೆ.
ಹಾಸನ ಜಿಲ್ಲೆ ಆಲೂರಿನ ಈಶ್ವರ್ ಅವರಿಗೆ 60 ವರ್ಷದ ಆಸುಪಾಸು. ತಮ್ಮ 25ನೇ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ ಬಳೆ ವ್ಯಾಪಾರ ಆಯ್ದುಕೊಂಡು ಸೈಕಲ್ ತುಳಿಯಲಾರಂಭಿಸಿದ ಇವರು ಇಂದಿಗೂ ನಿಲ್ಲಿಸಿಲ್ಲ.
ಆರಂಭದಲ್ಲಿ ತಮ್ಮದೇ ಬ್ಯಾಂಗಲ್ ಸ್ಟೋರ್ ಆರಂಭಿಸಿದ್ದರು. ಇನ್ನಷ್ಟು ಸಂಪಾದನೆ ಮಾಡಬೇಕೆಂಬ ಉತ್ಸಾಹದಿಂದ ಒಂದು ಸೈಕಲ್ ಖರೀದಿಸಿ ಗ್ರಾಮೀಣ ಭಾಗದತ್ತ ಮುಖ ಮಾಡಿದರು. ಹಾಸನ ಹಾಗೂ ಚಿಕ್ಕಮಗಳೂರಿನ ಹೋಲ್ಸೇಲ್ ಅಂಗಡಿಗಳಲ್ಲಿ ಬಳೆ ಖರೀದಿಸಿ ಊರೂರು ಸುತ್ತಾಡಿ ಮಾರಾಟ ಮಾಡುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಲಾಕ್ಡೌನ್ ಸಂದರ್ಭ ವ್ಯಾಪಾರ ಮಾಡಲು ಅವಕಾಶವಿಲ್ಲದಾಗ ಕೈ ಕಟ್ಟಿದ ಹಾಗೆ ಆಗಿತ್ತು. ಆಗ ಆಲೂರಲ್ಲಿದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ಕೆಲಸ ಮಾಡಿ ಅದನ್ನೂ ಸದ್ಬಳಕೆ ಮಾಡಿಕೊಂಡಿದ್ದಾರೆ.
ಜನವರಿ ಮತ್ತು ಮಾರ್ಚ್ನಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಹಾಕಿದ 8 ಸಾವಿರ ರೂ. ಹಾಗೂ ನನ್ನ ಪತ್ನಿ ಹೆಸರಿನ ಜನಧನ್ ಖಾತೆಗೆ 1 ಸಾವಿರ ರೂ. ಸರ್ಕಾರ ಬಂದಿತ್ತು. ಅದರಿಂದ ಹೊಟ್ಟೆಪಾಡಿಗೆ ಯಾವುದೆ ತೊಂದರೆಯಾಗಲಿಲ್ಲ. ಒಬ್ಬ ಪುತ್ರ 9ನೇ ತರಗತಿ ಓದುತ್ತಿದ್ದಾನೆ. ಜತೆಗೆ ಪೈಂಟಿಂಗ್ ಕೆಲಸ ಮಾಡುತ್ತಿದ್ದಾನೆ. ಮಗಳು 6ನೇ ತರಗತಿ ಓದುತ್ತಿದ್ದಾಳೆ. ಪತ್ನಿ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುತ್ತಿದ್ದಾಳೆ ಎಂದು ಈಶ್ವರ್ ನಗುಮೊಗದಿಂದಲೆ ಹೇಳುತ್ತಾರೆ.
ನನ್ನ ಜೀವನದಲ್ಲೇ ಇಂತಹ 50 ದಿನಗಳ ಲಾಕ್ಡೌನ್ ನೋಡಿಲ್ಲ. 25ನೇ ವಯಸ್ಸಿನಲ್ಲಿ ವ್ಯಾಪಾರ ಶುರು ಮಾಡಿದೆ. ಅಂದಿನಿಂದ ಇಂದಿನವರೆಗೂ ನಿತ್ಯ 40 ಕಿ.ಮೀ ಸೈಕಲ್ ತುಳಿದು ಗ್ರಾಮೀಣ ಪ್ರದೇಶದಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದೇನೆ. ಅನ್ನ ಕೊಟ್ಟ ಲಕ್ಷ್ಮೀಯನ್ನು ಎಂದಿಗೂ ಕೈಬಿಡುವುದಿಲ್ಲ. ಯಾವ ಕಾರಣಕ್ಕೂ ಬಳೆ ವ್ಯಾಪಾರವನ್ನು ಬಿಡುವುದಿಲ್ಲ ಎಂದು ಹೇಳುತ್ತಾರೆ.