ಚಿಕ್ಕಜಾಜೂರು: ಬಹಳಷ್ಟು ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯಲು ಮೊಬೈಲ್ ಕಾರಣವಾಗಿದೆ ಎಂದು ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಸ್.ಸುರೇಶ್ ಹೇಳಿದರು.
ಗ್ರಾಮದ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘದ ಸಮಾರೋಪದಲ್ಲಿ ಮಾತನಾಡಿ, ಯಾವುದೇ ವಿದ್ಯಾರ್ಥಿ ಭವಿಷ್ಯದಲ್ಲಿ ಏನಾದರೊಂದು ಸಾಧನೆ ಮಾಡಿದ್ದರೆ ಅದರ ಹಿಂದೆ ಗುರುವಿನ ಪ್ರೇರಣೆ ಇರುತ್ತದೆ. ಹೀಗಾಗಿ ಗುರುವಿಗೆ ಮಾನ್ಯತೆ ನೀಡಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರೊಂದಿಗಿನ ಸಂಬಂಧಗಳು ಹದಗೆಟ್ಟಿವೆ. ಮಾನವೀಯ ಮೌಲ್ಯಗಳಂತೂ ಮೈಲಿಗಿಂತಲೂ ದೂರ ಹೋಗಿವೆ. ಇದೆಲ್ಲದಕ್ಕೂ ಕಾರಣ ಅತಿಯಾದ ಮೊಬೈಲ್ ಬಳಕೆ ಎಂದರು.
ಮಲ್ಲಾಡಿಹಳ್ಳಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಪತಿ ನಾಗೋಳ್ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಡಿ ನಡೆದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್ ಮಾತನಾಡಿ, ನಾಯಕತ್ವ ಗುಣ ಬೆಳೆಯಲು ವಿದ್ಯಾರ್ಥಿ ಸಂಘಗಳು ಸಹಕಾರಿಯಾಗಿವೆ ಎಂದರು.
ಶಾಲಾ ಸಲಹಾ ಸಮಿತಿ ಅಧ್ಯಕ್ಷ ಕೆ.ಎಂ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎ.ಎನ್.ಕಿರಣ್ಕುಮಾರ್, ರುದ್ರಸ್ವಾಮಿ, ಸಲಹಾ ಸಮಿತಿ ಸದಸ್ಯರಾದ ಜಿ.ಬಿ.ಬಸವರಾಜ್, ಸಿ.ಬಿ.ರುದ್ರಪ್ಪ, ಗೀತಾ ಉಪಸ್ಥಿತರಿದ್ದರು.
ಶಿಕ್ಷಕ ಎಸ್.ಒ.ಷಣ್ಮುಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಎಚ್.ವಿ.ನವೀನ್ಕುಮಾರ್, ಸಾಂಸ್ಕೃತಿಕ ಬಹುಮಾನ ಕಾರ್ಯಕ್ರಮವನ್ನು ಶಿಕ್ಷಕಿ ಎಸ್.ಆರ್.ಹೇಮಲತಾ ನಡೆಸಿಕೊಟ್ಟರು.
ಶಿಕ್ಷಕರಾದ ಶಿವಾನಂದ ಮತ್ತು ಭಾನುಪ್ರಕಾಶ್ ಸ್ವಾಗತಿಸಿದರು. ಎಲ್.ಸಹನಾ ನಿರೂಪಿಸಿದರು. ಕೆ.ಎನ್.ಸೃಷ್ಟಿ ಪ್ರಾರ್ಥಿಸಿದರು. ಜಿ.ಎಚ್.ಹರೀಶ್ ವಂದಿಸಿದರು. ವಿದ್ಯಾರ್ಥಿಗಳು ಮನಮೋಹಕ ನೃತ್ಯ ಪ್ರದರ್ಶಿಸಿದರು.