ಮೈಸೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಇಂದು ಮೈಸೂರಿನ ಮಹಾರಾಜು ಕಾಲೇಜು ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದ ಉದ್ಘಾಟನೆ ಮಾಡಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದಾರೆ.
ಮೊದಲಿಗೆ ಜನರಿಗೆ ಶಿವರಾತ್ರಿಯ ಶುಭಾಶಯಗಳನ್ನು ಹೇಳುವ ಮೂಲಕ ಭಾಷಣ ಆರಂಭಿಸಿದ ಸಿಎಂ, “ಇಂದು ಶುಭ ದಿನ. ಈ ದಿನವೇ ಕೃಷಿ ಮೇಳ ನಡೆಯುತ್ತಿದೆ. ನಾನು ಅತ್ಯಂತ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.” ಎಂದು ಹೇಳಿದರು.
ದೇಶದ ಅನ್ನದಾತರ ಬಗ್ಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಮೂರು ದಿನಕಾಲ ನಡೆಯುವ ಕೃಷಿ ಮೇಳದಲ್ಲಿ ರೈತರ ಭಾಗವಹಿಸಬೇಕು ಎಂದು ಸಿಎಂ ಕರೆ ನೀಡಿದ್ದಾರೆ. ಮೊದಲ ಭಾರಿಗೆ ದೇಶದ ಬಜೆಟ್ನಲ್ಲಿ ಶೇ.9.5 ಹಣವನ್ನ ಕೇಂದ್ರ ಸರ್ಕಾರ ಕೃಷಿಗೆಂದು ಮೀಸಲಿಟ್ಟಿದೆ. ರೈತರ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸಿದೆ. ಕರ್ನಾಟಕ ಸರ್ಕಾರ ರೈತರ ಪರವಾಗಿದೆ. ರೈತರ ಬದುಕನ್ನ ಸುಸ್ಥಿರ ಮಾಡಬೇಕಾಗಿದೆ. ಕೃಷಿಯನ್ನು ಲಾಭದಾಯಕವಾಗಿ ಮಾಡುವುದು ಅಗತ್ಯ. ರೈತರ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ಸಿಗಬೇಕು. ರಾಜ್ಯದಲ್ಲಿ ಕೃಷಿ ಗಮನಾರ್ಹ ಸಾಧನೆಯಾಗಿದೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಅವರು ಹೇಳಿದರು.
ಗೊಬ್ಬರ, ಔಷಧಿ ಹಾಕುವುದರಿಂದ ಕೃಷಿ ಭೂಮಿ ಹಾಳಾಗುತ್ತಿದೆ. ಕೇವಲ ಲಾಭಕೋಸ್ಕರ ಹಣ್ಣುಗಳಿಗೆ ಔಷಧಿ ಸಿಂಪಡಿಸುತ್ತಿದ್ದಾರೆ. ಇದು ಆಗಬಾರದು ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಕೆರೆಕಟ್ಟೆಗಳನ್ನ ತುಂಬಿಸಬೇಕಾಗಿದೆ. ಯುವಕರು ಕೃಷಿಯಿಂದ ದೂರ ಉಳಿಯುತ್ತಿದ್ದಾರೆ. ಯುವಕರಿಗೆ ರೈತರ ಬಗ್ಗೆ ಉತ್ತೇಚನೆ ಕೊಡುವ ಕೆಲಸ ಆಗಬೇಕಾಗಿದೆ. ಕಡಿಮೆ ನೀರನ್ನ ಬಳಸಿ ಹೆಚ್ಚು ಕೃಷಿಯನ್ನ ಬೆಳೆಯಬೇಕಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಎಲ್ಲ ಸಹಕಾರ ಕೊಡಲು ಸಿದ್ದವಿದೆ. ಬಜೆಟ್ನಲ್ಲಿ ಕೃಷಿ ಹೆಚ್ಚು ಒತ್ತನ್ನ ಕೊಡಬೇಕಾಗಿದೆ ಎಂದು ಸಿಎಂ ಹೇಳಿದರು.
ಕಳಸಾ ಬಂಡೂರಿ ಯೋಜನೆಯ ಕುರಿತಾಗಿ ಮಾತನಾಡಿದ ಅವರು, “ಕಳಸಾ ಬಂಡೂರಿ ಯೋಜನೆಗೆ ನ್ಯಾಯ ಸಿಕ್ಕಿದೆ. ಸುಮಾರಿ 17 ಟಿಎಂಸಿ ನೀರನ್ನ ಬಳಸುವ ಅವಕಾಶ ಸಿಕ್ಕಿದೆ.” ಎಂದು ಹೇಳಿದರು.
ಕೃಷಿ ಮೇಳ ಆಯೋಜನೆ ಮಾಡುವ ಮೂಲಕ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯಸಂಕೇಶ್ವರ ಇಟ್ಟ ದಿಟ್ಟ ಹಜ್ಜೆಯನ್ನು ಮುಖ್ಯಮಂತ್ರಿಗಳು ಪ್ರಶಂಶಿಸಿದ್ದಾರೆ.