ಚೆನ್ನೈ: ವೇಗಿ ಸಿಮ್ರಾನ್ಜೀತ್ ಸಿಂಗ್ (26ಕ್ಕೆ 3) ಬಿಗಿ ದಾಳಿ ಹಾಗೂ ನಾಯಕ ಋತುರಾಜ್ ಗಾಯಕ್ವಾಡ್ (42* ರನ್, 41 ಎಸೆತ, 1 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್&17ರಲ್ಲಿ ರಾಜಸ್ಥಾನ ರಾಯಲ್ಸ್ ಎದುರು 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಋತುರಾಜ್ ಗಾಯಕ್ವಾಡ್ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದು, ಪ್ಲೇಆ್ ಸನಿಹಕ್ಕೇರಿದೆ.
ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್, ರಿಯಾನ್ ಪರಾಗ್ (47 ರನ್, 35 ಎಸೆತ,1 ಬೌಂಡರಿ, 3 ಸಿಕ್ಸರ್) ಆಸರೆಯಲ್ಲಿ 5 ವಿಕೆಟ್ಗೆ 141 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಉತ್ತಮ ಆರಂಭ ಪಡೆದ ಸಿಎಸ್ಕೆ, 18.2 ಓವರ್ಗಳಲ್ಲಿ 5 ವಿಕೆಟ್ಗೆ 145 ರನ್ಗಳಿಸಿ ಸುಲಭ ಗೆಲುವು ದಾಖಲಿಸಿತು.
ಋತುರಾಜ್ ಸಮಯೋಚಿತ ಆಟ
ಸುಲಭ ಗುರಿ ಬೆನ್ನತ್ತಿದ್ದ ಸಿಎಸ್ಕೆಗೆ ರಚಿನ್ ರವೀಂದ್ರ (27) ಹಾಗೂ ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 22 ಎಸೆತದಲ್ಲಿ 32 ರನ್ಗಳಿಸಿ ಅಡಿಪಾಯ ಹಾಕಿಕೊಟ್ಟರು. ಆಗ ದಾಳಿಗಿಳಿದ ಆರ್.ಅಶ್ವಿನ್ ಈ ಜತೆಯಾಟ ಮುರಿದರು. ನಂತರ ಗಾಯಕ್ವಾಡ್ ಜತೆಯಾದ ಡೆರಿಲ್ ಮಿಚೆಲ್ (22)ಚೇಸಿಂಗ್ಗೆ ಬಲ ತುಂಬಿದರು. ಮಿಚೆಲ್ ಬಿರುಸಿನಾಟಕ್ಕೆ ಋತುರಾಜ್ ಸಾಥ್ ನೀಡಿದರು. ನಂತರ ಮೊಯಿನ್ ಅಲಿ (10), ಶಿವಂ ದುಬೆ (18) ಹಾಗೂ ರವೀಂದ್ರ ಜಡೇಜಾ (5) ಉಪಯುಕ್ತ ಕೊಡುಗೆ ನೀಡಿದರು.6ನೇ ವಿಕೆಟ್ಗೆ ಜತೆಯಾದ ಗಾಯಕ್ವಾಡ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಸಮೀರ್ ರಿಜ್ವಿ (15*) ಜೋಡಿ ಇನ್ನು 10 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿತು. 5 ರನ್ ಅಗತ್ಯವಿದ್ದಾಗ ಸತತ ಬೌಂಡರಿ ಸಿಡಿಸಿದ ರಿಜ್ವಿ ಸಿಎಸ್ಕೆ ಗೆಲುವು ಸಾರಿದರು.
ಸಿಮ್ರಾನ್ಜೀತ್ ಕಡಿವಾಣ: ಸಿಎಸ್ಕೆ ಬೌಲರ್ಗಳ ಶಿಸ್ತಿನ ದಾಳಿಯ ಎದುರು ಎಚ್ಚರಿಕೆಯ ಆರಂಭ ಪಡೆದ ರಾಜಸ್ಥಾನ ರಾಯಲ್ಸ್ಗೆ ಯುವ ವೇಗಿ ಸಿಮ್ರಾನ್ಜೀತ್ ಆಘಾತ ನೀಡಿದರು. ಜೋಸ್ ಬಟ್ಲರ್ (21) ಹಾಗೂ ಯಶಸ್ವಿ ಜೈಸ್ವಾಲ್ (24) ಉತ್ತಮ ಆರಂಭ ಒದಗಿಸಿದರು. ಪವರ್ ಪ್ಲೇ ಬಳಿಕ ದಾಳಿಗಿಳಿದ ಸಿಮ್ರಾನ್ಜೀತ್, ಇನಿಂಗ್ಸ್ನ 7ನೇ ಓವರ್ನಲ್ಲಿ ಜೈಸ್ವಾಲ್, 9ನೇ ಓವರ್ನಲ್ಲಿ ಬಟ್ಲರ್ ವಿಕೆಟ್ ಪಡೆದು ಕಡಿವಾಣ ಹೇರಿದರು. ನಾಯಕ ಸಂಜು ಸ್ಯಾಮ್ಸನ್ (15) ಸಹ ಬೇಗನೆ ಡಗೌಟ್ ಸೇರಿದರು. ಆಗ ರಿಯಾನ್ ಪರಾಗ್ ಹಾಗೂ ಧ್ರುವ ಜುರೆಲ್ ತಂಡಕ್ಕೆ ಆಸರೆಯಾದರು. 29 ಎಸೆತದಲ್ಲಿ 40 ರನ್ಗಳಿಸಿದ ಇವರಿಬ್ಬರು ತಂಡದ ಮೊತ್ತ ಏರಿಸಿದರು. ಸ್ಲಾಗ್ ಓವರ್ಗಳಲ್ಲಿಯೂ ಬಿಗಿ ದಾಳಿ ನಡೆಸಿದ ಸಿಎಸ್ಕೆ, ರಾಜಸ್ಥಾನ ಬ್ಯಾಟರ್ಗಳಿಗೆ ಕಡಿವಾಣ ಹೇರಿದರು.