ಮೂಡಿಗೆರೆ: ಮಾಳವಿಕಾ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪನಿಯ ಐವರು ನಿರ್ದೇಶಕರಿಗೆ ಮೂಡಿಗೆರೆ ಜೆಎಂಎಫ್ಸಿ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ಮಾಳವಿಕಾ ಸಿದ್ದಾರ್ಥ ಹೆಗ್ಡೆ, ಕಂಪನಿ ನಿರ್ದೇಶಕರಾದ ಸದಾನಂದ ಪೂಜಾರ್, ಜಯರಾಜ್ ಸಿ.ಹುಬ್ಲಿ, ಕಿರೀಟಿ ಸಾವಂತ್ ಮತ್ತು ಜಾವಿದ್ ಫರ್ವೀಜ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಿದೆ. ಮತ್ತೊಬ್ಬ ನಿರ್ದೇಶಕ ನಿತಿನ್ ಬಾಗಮನೆ ಈಗಾಗಲೇ ಹೈಕೋರ್ಟ್ನಲ್ಲಿ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಮೇಲ್ಮನವಿ ಸಲ್ಲಿಸಿರುವುದರಿಂದ ಅವರು ಮೂಡಿಗೆರೆ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಲಿಲ್ಲ ಎನ್ನಲಾಗಿದೆ. ಅಂದಹಾದೆ ಏನಿದು ಪ್ರಕರಣ?
ಏನಿದು ಪ್ರಕರಣ?: ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪನಿ ನೀಡಿದ್ದ ಚೆಕ್ಗಳು ಅಮಾನ್ಯವಾಗಿವೆ ಎಂದು ಮಾಕೋನಹಳ್ಳಿಯ ಕಾಫಿ ಬೆಳೆಗಾರ ಕೆ. ನಂದೀಶ್ ಎಂಬುವರು ಜುಲೈ 15ರಂದು ಮೂಡಿಗೆರೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಕಾಫಿ ಡೇ ಗ್ಲೋಬಲ್ ಇಂಡಿಯಾ ತಮ್ಮಿಂದ ಖರೀದಿ ಮಾಡಿದ ಕಾಫಿಗೆ 45 ಲಕ್ಷ ರೂ. ಹಣ ಕೊಡಬೇಕಿದ್ದು, ವಿವಿಧ ಮೊತ್ತದ 10 ಚೆಕ್ ನೀಡಿದ್ದರು ಎನ್ನಲಾಗಿದ್ದು, ಈ ಚೆಕ್ಗಳು ಬೌನ್ಸ್ ಆಗಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದರು.
ಅ. 6ರಂದು ನ್ಯಾಯಾಲಯಕ್ಕೆ ಹಾಜರಾಗಲು ಕಂಪನಿಯ ಎಂಟು ನಿರ್ದೇಶಕರಿಗೆ ಸಮನ್ಸ್ ಜಾರಿಯಾಗಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು.