ಚನ್ನಗಿರಿ: ತಾಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಕೆಎಸ್ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.
ತಾಲೂಕಿನ ಜೋಳದಾಳು ಗ್ರಾಮದ ಶ್ರೀಕ್ಷೇತ್ರ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ಭಾನುವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು.
ಏಷ್ಯಾದಲ್ಲೇ ಎರಡನೇ ದೊಡ್ಡ ಕೆರೆ ಸೂಳೆಕೆರೆ, ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ, ಹೊದಿಗೆರೆ ಷಹಾಜಿ ಸಮಾಧಿ, ಚನ್ನಗಿರಿಯ ಕೆಳದಿ ಚೆನ್ನಮ್ಮ ಕೋಟೆ, ಸಂತೇಬೆನ್ನೂರಿನ ಪುಷ್ಕರಣಿ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿವೆ. ಇಲ್ಲಿಗೆ ರಾಜ್ಯ ಸೇರಿ ಹೊರಗಿನಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಂತಹ ತಾಣಗಳಲ್ಲಿ ವ್ಯವಸ್ಥಿತವಾಗಿ ಸೌಕರ್ಯ, ಸೌಲಭ್ಯ ಒದಗಿಸಬೇಕು. ಇದು ಮತ್ತಷ್ಟು ಜನರನ್ನು ಆಕರ್ಷಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ತಂದು ಸೂಳೆಕೆರೆ ಅಭಿವೃದ್ಧಿ ಮಾಡಲಾಗಿತ್ತು. ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಿದ್ದೆ. ತಾಲೂಕಿನ ಅಮ್ಮನಗುಡ್ಡ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಹೊಸ ಕಟ್ಟಡ ಕಟ್ಟಲಾಗಿದೆ. ಹೊದಿಗರೆ ಷಹಾಜಿ ಗೋರಿಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು.
ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ಯಾತ್ರಿ ನಿವಾಸಕ್ಕೆ ಹೆಚ್ಚುವರಿ ಕೊಠಡಿ, ಕಾಂಕ್ರಿಟ್ ರಸ್ತೆ, ಕಾಂಪೌಂಡ್, ಕುಡಿಯುವ ನೀರು ಸೇರಿ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ತಹಸೀಲ್ದಾರ್ ಡಾ.ಪಟ್ಟರಾಜಗೌಡ, ತಾಪಂ ಇಒ ಎಂ.ಆರ್.ಪ್ರಕಾಶ್, ಪಿಎಸ್ಐ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಸತೀಶ್, ಲೋಕೋಪಯೋಗಿ ಇಂಜಿನಿಯರ್ ಶಿವಕುಮಾರ್, ಬಿಎಸ್ಎನ್ಎಲ್ ಅಧಿಕಾರಿ ಸಚ್ಚಿದಾನಂದ ಇದ್ದರು.