More

    ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಗೂಸಾ; ಚನ್ನಗಿರಿ ತಾಲೂಕಿನಲ್ಲಿ ಘಟನೆ, ಪ್ರಾಥಮಿಕ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

    ಚನ್ನಗಿರಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಥಳಿಸಿ ಶಾಲೆಗೆ ಬೀಗ ಜಡಿದ ಘಟನೆ ಶುಕ್ರವಾರ ಸಂಜೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಗೂಸಾ; ಚನ್ನಗಿರಿ ತಾಲೂಕಿನಲ್ಲಿ ಘಟನೆ, ಪ್ರಾಥಮಿಕ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

    ತಾಲೂಕಿನ ಗ್ರಾಮವೊಂದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ನಿತ್ಯವೂ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ವಿದ್ಯಾರ್ಥಿನಿಯರು ಅಂಜಿ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ ಎನ್ನಲಾಗಿದೆ.

    ಶಾಲೆ ಅವಧಿ ಮತ್ತು ಶಾಲೆ ಬಿಟ್ಟ ಅವಧಿಯಲ್ಲೂ ಆರು ಮತ್ತು ಏಳನೇ ತರಗತಿಯ ಕೆಲ ವಿದ್ಯಾರ್ಥಿನಿಯರಿಗೆ ಏನೇನೋ ನೆಪ ಹೇಳಿ ಇರಿಸಿಕೊಂಡು ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಧೈರ್ಯ ಮಾಡಿ ಮನೆಯಲ್ಲಿ ಪಾಲಕರಿಗೆ ವಿಷಯ ತಿಳಿಸಿದ್ದಾಳೆ.

    ವಿದ್ಯಾರ್ಥಿನಿಯರ ಪಾಲಕರು ಒಬ್ಬರಿಗೊಬ್ಬರು ಈ ಬಗ್ಗೆ ಚರ್ಚೆ ನಡೆಸಿ, ತಮ್ಮ ತಮ್ಮ ಮಕ್ಕಳಲ್ಲಿ ವಿಚಾರಿಸಿದಾಗ ಮಕ್ಕಳು ಸತ್ಯಾಂಶ ಬಾಯಿಬಿಟ್ಟಿದ್ದಾರೆ. ಪಾಲಕರೆಲ್ಲ ಸೇರಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

    ಶುಕ್ರವಾರ ಸಂಜೆ ಪಾಲಕರು, ಗ್ರಾಮಸ್ಥರೆಲ್ಲ ಒಟ್ಟುಗೂಡಿ ಶಾಲೆಗೆ ತೆರಳಿ ಶಿಕ್ಷಕನನ್ನು ಹೊರಗೆಳೆದು ಥಳಿಸಿದ್ದಾರೆ. ಅಲ್ಲದೇ, ಶಾಲೆಗೆ ಬೀಗ ಜಡಿದು ಬಂದಿದ್ದಾರೆ. ಅಲ್ಲದೇ, ಶಿಕ್ಷಕನ ಅಮಾನತಿಗೆ ಆಗ್ರಹಿಸಿದ್ದಾರೆ. ವಿಷಯ ತಿಳಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್ ಶಾಲೆಗೆ ಭೇಟಿ ನೀಡಿ ಪಾಲಕರ, ಮಕ್ಕಳ ದೂರು ಆಲಿಸಿದ್ದಾರೆ.

    ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಕೆಲ ಮುಖಂಡರು ಸೇರಿ ರಾಜಿ ಪಂಚಾಯಿತಿ ಮಾಡಿಸಿದ್ದಾರೆಂದು ತಿಳಿದು ಬಂದಿದೆ.

    ಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಲಕರಿಂದ ದೂರು ಪಡೆಯಲಾಗಿದೆ. ಮೇಲಧಿಕಾರಿಗಳಿಗೆ ವರದಿ ಸಲ್ಲಿಸಸಲಾಗುತ್ತದೆ. ಈ ವಿಚಾರದಲ್ಲಿ ಇಲಾಖೆ ನೀಡುವ ಆದೇಶ ಪಾಲನೆ ಮಾಡಲಾಗುತ್ತದೆ. ಶಾಲೆಗೆ ಬೀಗ ಹಾಕುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುವ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಶಾಲೆ ಬೀಗ ತೆಗೆಸಲಾಗಿದೆ.
    ಕೆ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts