ಚನ್ನಗಿರಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಬಡವರು, ಕೂಲಿ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಎಲ್.ಎಚ್. ಮಂಜುನಾಥ್ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂತೇಬೆನ್ನೂರು ವಲಯ ಕೇಂದ್ರದ ಕಚೇರಿ ಉದ್ಘಾಟಿಸಿ, ಮಾತನಾಡಿದರು.
ತಾಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು 1500 ಕೋಟಿಯಷ್ಟು ವಹಿವಾಟು ನಡೆಸಲಾಗಿದೆ. ಇತ್ತೀಚೆಗೆ ತಾಲೂಕಿನಲ್ಲಿ 150 ಸ್ಥಳೀಯ ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಿದೆ. ಸಂಸ್ಥೆಗೆ ಎಲ್ಲರ ಸಹಕಾರ ಬೇಕಿದೆ ಎಂದರು.
ಸಂಸ್ಥೆಯು ಜನರ ಸಮಸ್ಯೆ ನಮ್ಮ ಸಮಸ್ಯೆ ಎಂದು ತಿಳಿದಿದೆ. ಜನರ ಅಗತ್ಯತೆಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ನಿಜವಾದ ಅಶಕ್ತರನ್ನು ಗುರುತಿಸಿ 1800 ಫಲಾನುಭವಿಗಳಿಗೆ ಮಾಸಾಶನ ನೀಡಿದೆ. ಸ್ವ ಉದ್ಯೋಗ ಕೈಗೊಳ್ಳಲು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ಯೋಜನೆ ಜಾರಿಗೆ ತರುತ್ತಿದೆ ಎಂದರು.
ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ಕರ್ಮ ಭೂಮಿಯನ್ನು ಧರ್ಮ ಭೂಮಿಯನ್ನಾಗಿ ಸಂಸ್ಥೆ ಮಾಡಿದೆ. ಧಾರ್ಮಿಕ ಸಮಾರಂಭಗಳಲ್ಲಿ ವರ್ಗ, ವರ್ಣ, ಜಾತಿ, ಲಿಂಗ ರಹಿತವಾಗಿ ಆಯೋಜಿಸುತ್ತಿದೆ. ಮದ್ದು-ಮಾತ್ರೆಗಳಿಲ್ಲದೆ ಮನಪರಿವರ್ತನೆ ಮೂಲಕ ಮದ್ಯ ವ್ಯಸನಿಗಳಿಗೆ ಮರುಜೀವನ ನೀಡುತ್ತಿದೆ ಎಂದರು.
ವಕೀಲ ರಾಮಚಂದ್ರರಾವ್, ಸಂಸ್ಥೆ ನಿರ್ದೇಶಕಿ ಗೀತಾ, ಚಿತ್ರದುರ್ಗ ಉಪನಿರ್ದೇಶಕ ದಿನೇಶ್ ಪೂಜಾರಿ, ಸಂತೇಬೆನ್ನೂರು ಯೋಜನಾಧಿಕಾರಿ ರವಿಚಂದ್ರ, ಚನ್ನಗಿರಿ ಯೋಜನಾಧಿಕಾರಿ ಅಜಿತ್, ಶಿವಕುಮಾರ್, ಚನ್ನಬಸಪ್ಪ, ಜಗದೀಶ್ ಇತರರಿದ್ದರು.