ಚಾಮರಾಜನಗರ: ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪಕ್ಷಿ ಸಂಕುಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಾಡುವ ಹೊಣೆ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವಗುಬ್ಬಚ್ಚಿ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗುಬ್ಬಚ್ಚಿ ಆಹಾರ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪಕ್ಷಿಯಾಗಿದೆ. 25 ರಿಂದ 40 ಗ್ರಾಂ ಇರುವ ಗುಬ್ಬಚ್ಚಿಯನ್ನು ಎಲ್ಲರೂ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಆದರೆ ಪ್ರಸ್ತುತ ಅನೇಕ ಕಾರಣಗಳಿಂದ ಗುಬ್ಬಚ್ಚಿಯ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಗುಬ್ಬಚ್ಚಿಯ ಸಂಖ್ಯೆ ಹೆಚ್ಚಳವಾಗಲು ಸೂಕ್ತ ಪರಿಸರ ನಿರ್ಮಾಣ, ಮರ ಗಿಡಗಳ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಉತ್ತಮ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ. ಪ್ರತಿ ವರ್ಷ ಮಾ.20ರಂದು ವಿಶ್ವಗುಬ್ಬಚ್ಚಿಯ ದಿನವೆಂದು ಆಚರಿಸಿ ಜಾಗೃತಿಯ ಮೂಡಿಸುವ ಕಾರ್ಯ ವಿಶ್ವದಲ್ಲೆಡೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಪವನ್, ತೇಜಸ್, ಶ್ರಾವ್ಯ, ಧನ್ ಬಹದ್ದೂರ್ ಸಿಂಗ್, ಗಣೇಶ್ ಹಾಜರಿದ್ದರು.