ಚಾಮರಾಜನಗರ: ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನ ಇಂದು ಮೈಸೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಅದಕ್ಕೂ ಮುನ್ನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಸುಮಾರು 2 ಗಂಟೆಗಳ ಕಾಲ ಸಫಾರಿ ನಡೆಸುತ್ತಿದ್ದಾರೆ.
ಬಂಡೀಪುರಕ್ಕೆ ಆಗಮಿಸಿದ ಮೊದಲ ಪ್ರಧಾನಿ
ಬಂಡೀಪುರದಲ್ಲಿ ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ಪೂರ್ಣಗೊಂಡಿದೆ. 1973ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಹುಲಿ ಯೋಜನೆ ಘೋಷಣೆ ಮಾಡಿದ್ದರು ಎನ್ನುವುದು ಇತಿಹಾಸ. ಈಗ ಪಿಎಂ ಮೋದಿ ಹೊಸ ದಾಖಲೆ ಬರೆದಿದ್ದು, ಬಂಡೀಪುರಕ್ಕೆ ಆಗಮಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ನಮೋ: ಸಾಮಾನ್ಯ ಬೊಲೆರೋ ವಾಹನದಲ್ಲಿ ಪ್ರಧಾನಿ ಮೋದಿ ಸಫಾರಿ
ಕರ್ನಾಟಕ ನಮ್ಮೆಲ್ಲರ ಹೆಮ್ಮೆ
ಕರ್ನಾಟಕ ಹುಲಿಗಳ ನಾಡಾಗಿದೆ. ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಬಂಡೀಪುರ ಅಭಯಾರಣ್ಯದಲ್ಲಿ ಅತಿ ಹೆಚ್ಚು ಹುಲಿಗಳಿವೆ. 2022ರ ಹುಲಿ ಸಮೀಕ್ಷೆಯ ಪ್ರಕಾರ ಕರ್ನಾಟಕ ನಂಬರ್ 1 ಸ್ಥಾನಕ್ಕೇರುವ ಸಾಧ್ಯತೆ ಇದೆ. ಅಗಾಧ ಪ್ರಕೃತಿ ಸಂಪತ್ತು ಹೊಂದಿರುವ ಕರ್ನಾಟಕ ನಮ್ಮೆಲ್ಲರ ಹೆಮ್ಮೆಯಾಗಿದೆ. ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ಪೂರ್ಣಗೊಂಡಿರುವ ಈ ಸಂರ್ಭದಲ್ಲಿ ಕೆಲವೊಂದಿಷ್ಟು ಉಪಯುಕ್ತ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.
* ಹುಲಿಗಳ ವೈಜ್ಞಾನಿಕ ಹೆಸರು ಪ್ಯಾಂಥೇರಾ ಟೈಗ್ರಿಸ್
* ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದ್ದಕ್ಕೆ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಯೋಜನೆ ಆರಂಭ
* ಭಾರತದಲ್ಲಿ 53 ಹಾಗೂ ಕರ್ನಾಟಕದಲ್ಲಿ 5 ಹುಲಿ ಸಂರಕ್ಷಣಾ ತಾಣಗಳಿವೆ
* ಜಿಮ್ ಕಾರ್ಬೆಟ್ ಉದ್ಯಾನವನದಿಂದ ಟೈಗರ್ ಪ್ರಾಜೆಕ್ಟ್ ಯೋಜನೆ ಶುರುವಾಯಿತು
* ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಹುಲಿ ಗಣತಿ ನಡೆಯುತ್ತದೆ
* ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಭಾರತ
* ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ
* 2018ರ ಹುಲಿ ಗಣತಿಯಂತೆ ಮಧ್ಯಪ್ರದೇಶವು 526 ಹುಲಿಗಳನ್ನು ಹೊಂದಿದೆ
* ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 524 ಹುಲಿಗಳಿವೆ
* 2022ರ ಹುಲಿ ಸಮೀಕ್ಷೆಯ ಪ್ರಕಾರ ಕರ್ನಾಟಕ ಮೊದಲ ಸ್ಥಾನಕ್ಕೇರುವ ನಿರೀಕ್ಷೆ ಇದೆ
* ಬಂಡೀಪುರ ರಾಷ್ಟ್ರೀಯ ಅಭಯಾರಣ್ಯವು ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ
* ಕರ್ನಾಟಕದಲ್ಲಿ 36 ಲಕ್ಷ ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶವಿದ್ದು, ಇದರಲ್ಲಿ 5 ಹುಲಿ ಸಂರಕ್ಷಿತ ಪ್ರದೇಶವಿದೆ
* ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ ಮತ್ತು ಬಿಳಿಗಿರಿರಂಗನ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶಗಳೆಂದು ಗುರುತಿಸಲಾಗಿದೆ
ಇದನ್ನೂ ಓದಿ: ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..
ಬಂಡೀಪುರ ಸಂರಕ್ಷಿತಾರಣ್ಯದ ಇತಿಹಾಸ
* 1931ರಲ್ಲಿ ಬಂಡೀಪುರ ಅಭಯಾರಣ್ಯ ಆರಂಭವಾಯಿತು
* ಬಂಡೀಪುರ ಅರಣ್ಯ ಪ್ರದೇಶ 90 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ
* ಅಭಯಾರಣ್ಯಕ್ಕೆ ಜಾಗ ನೀಡಿದ್ದು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್
* ಈ ಅಭಯಾರಣ್ಯವನ್ನು 1941ರಲ್ಲಿ 800 ಚದುರ ಕಿ.ಮೀಗೆ ವಿಸ್ತರಣೆ ಮಾಡಲಾಯಿತು. ಈ ವೇಳೆ ವೇಣುಗೋಪಾಲ ವನ್ಯಜೀವಿ ಎಂದು ಘೋಷಣೆ ಮಾಡಲಾಯಿತು
* 1973ರಲ್ಲಿ ಹುಲಿ ಮೀಸಲು ಅರಣ್ಯವೆಂದು ಕೇಂದ್ರ ಸರ್ಕಾರದಿಂದ ಘೋಷಣೆ
* 1973ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು
* 1985ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾವನ ಎಂದು ಘೋಷಣೆ
* ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಈ ಮೀಸಲು ಅರಣ್ಯ ಪ್ರದೇಶ ವಿಸ್ತರಿಸಿಕೊಂಡಿದೆ
ಬಂಡೀಪುರದಲ್ಲಿ ಮೋದಿ ಸಫಾರಿ: ಹುಲಿ ರಕ್ಷಿತಾರಣ್ಯದಲ್ಲಿ ಪ್ರಧಾನಿ ಪ್ರವಾಸ; ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ