ಚಳ್ಳಕೆರೆ: ಸರ್ಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ಪ್ರತ್ಯೇಕವಾಗಿ ಕರೋನಾ ಲಕ್ಷಣಗಳ ಪರೀಕ್ಷೆ ಮಾಡಲು ಕೋವಿಡ್ 19 ಪರೀಕ್ಷಾ ಕೇಂದ್ರ ಸ್ಥಾಪಿಸಿರುವುದು ಮಾದರಿ ಕಾರ್ಯ ಎಂದು ಆಸ್ಪತ್ರೆ ಮತ್ತು ತಾಪಂ ಆಡಳಿತ ಕಾರ್ಯಕ್ಕೆ ಶಾಸಕ ಟಿ.ರಘುಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕೋವಿಡ್ 19 ಪರೀಕ್ಷಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ತಾಲೂಕು ಆಡಳಿತವು ಮುಂಜಾಗ್ರತ ಕಾರ್ಯ ಕೈಗೊಳ್ಳುವ ಮೂಲಕ ಕರೊನಾ ನಿಯಂತ್ರಿಸುವಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ, ಗಡಿ ಭಾಗವಾಗಿರುವ ಕಾರಣ, ಪರಸ್ಪರ ಆಂಧ್ರಪ್ರದೇಶದ ಜನರ ಸಂಚಾರ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಬೇಕು. ಬೆಂಗಳೂರು ಸೇರಿ ಇತರೆ ಜಿಲ್ಲೆಗಳಿಂದ ಯಾರೇ ಬಂದರೂ ಅವರ ಮಾಹಿತಿ ಸಂಗ್ರಹ ಮತ್ತು ಕೋವಿಡ್ 19 ತಪಾಸಣಾ ಕಾರ್ಯ ನಡೆಸಲೇಬೇಕು ಎಂದು ತಿಳಿಸಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಸವರಾಜ್ ಮಾತನಾಡಿ, ಗಂಟಲು ದ್ರವ ಪರೀಕ್ಷೆ ಸಾಮಾನ್ಯ ಆಸ್ಪತ್ರೆ ವ್ಯವಸ್ಥೆಯಲ್ಲಿ ಮಾಡಲು ಸಾಧ್ಯವಿಲ್ಲ. ಪ್ರತ್ಯೇಕವಾಗಿ ತೆರೆದಿರುವ ಕೇಂದ್ರದಲ್ಲಿ ವೈದ್ಯರ ಸುರಕ್ಷತೆ ದೃಷ್ಟಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಪಾಸಿಟೀವ್ ಇರುವ ಪ್ರದೇಶ ಮತ್ತು ರೆಡ್ಜೋನ್ ಭಾಗದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುವುದು. ತಾಲೂಕು ಕೇಂದ್ರದ ಜತೆಗೆ ಪರಶುರಾಮಪುರ, ದೊಡ್ಡ ಉಳ್ಳಾರ್ತಿ, ನಾಯಕನಹಟ್ಟಿ ಭಾಗದಲ್ಲೂ ಪರೀಕ್ಷಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ಶ್ರೀಧರ್ಬಾರಿಕರ್, ಡಾ.ಓಂಕಾರಮೂರ್ತಿ, ಡಾ.ಸತೀಶ್ ಆದಿಮನಿ, ಡಾ.ಜಯಲಲಕ್ಷ್ಮಿ, ಡಾ.ಪ್ರಜ್ವಲ್ ದನ್ಯ, ಡಾ.ವೆಂಕಟೇಶ್, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಸಿಬ್ಬಂದಿ ಗಂಗಾಧರ, ಎಚ್.ತಿಪ್ಪೇಸ್ವಾಮಿ, ಪ್ರಸನ್ನಕುಮಾರ್, ಚಂದ್ರಪ್ಪ, ನಿರ್ಮಲಾ, ನಾಗರತ್ನ, ಓಂಕಾರಮ್ಮ, ಸರಸ್ವತಿ ಮತ್ತಿತರರು ಇದ್ದರು.