ಚಳ್ಳಕೆರೆ: ತಾಲೂಕಿನ ರಾಮಜೋಗಿಹಳ್ಳಿ, ಸೋಮಗುದ್ದು ಸಾಣೀಕೆರೆ ಗ್ರಾಪಂ ವ್ಯಾಪ್ತಿ ಅಂದಾಜು 3800 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿರುವ ಕಡಲೆ ಬೆಳೆಗೆ ರೋಗ ತಗುಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಗಾರಿನಂತೆ ಹಿಂಗಾರು ಮಳೆ ಕೈಕೊಟ್ಟಿದ್ದು, ಬಿತ್ತನೆ ಮಾಡಿದ್ದ ಬೆಳೆ ನಿರೀಕ್ಷಿತ ಫಲ ನೀಡುತ್ತಿಲ್ಲ. ಈಗ ಕಡಲೆ ಬೆಳೆಗೂ ರೋಗ ತಗುಲಿದ್ದು, ಜೋರು ಮಳೆಯಾಗದೇ ಕಳೆರೋಗದಿಂದ ಮುಕ್ತಿ ಕಾಣುತ್ತಿಲ್ಲ.
ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಬಿತ್ತನೆ ಮಾಡಿರುವ ಕಡಲೆ ತೊಂಬತ್ತು ದಿನಗಳ ಫಸಲಾಗಿದೆ. ಸುಮಾರು 2 ತಿಂಗಳ ಅವಧಿಯಾದರೂ ನಿರೀಕ್ಷಿತ ಬೆಳವಣಿಗೆ ಇಲ್ಲದೆ ಹೂವು ಕಟ್ಟದೆ ಫಸಲು ಕುಂಠಿತವಾಗಿದೆ. ಇದರಿಂದ ಬಿತ್ತನೆ ಖರ್ಚು ಮಾಡಿದ್ದ ಹಣ ವಾಪಸ್ ಬರುವುದು ಕಷ್ಟವಾಗಿದೆ.
ಕಳೆದ ಬಾರಿ ಉತ್ತಮ ಬೆಳೆ ಬಂದಿತ್ತು. 13 ಎಕರೆಯಲ್ಲಿ 90 ಪಾಕೆಟ್ ಕಡಲೆ ಬೆಳೆಯಲಾಗಿತ್ತು. ಆದರೆ, ಈ ವರ್ಷ ಹೆಚ್ಚು ತೇವಾಂಶದಿಂದ ಕೊಳೆರೋಗಕ್ಕೆ ತುತ್ತಾಗಿರುವ ಗಿಡಗಳಿಂದ ಅವಧಿಯಲ್ಲಿ ಬೆಳವಣಿಗೆ ಕಂಡಿಲ್ಲ. 1 ಎಕರೆ ಬಿತ್ತನೆ ಮತ್ತು ಕಳೆ, ಗೊಬ್ಬರಕ್ಕೆ 12 ಸಾವಿರ ರೂ. ಖರ್ಚು ಮಾಡಿಕೊಂಡಿದ್ದೇವೆ. 15 ಎಕರೆಯಲ್ಲಿ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆ ನಿರ್ದೇಶನದಂತೆ ಔಷಧ ಸಿಂಪಡಣೆ ಮಾಡಿದರೂ ಗಿಡಗಳಿಗೆ ರೋಗಬಾಧೆ ತಪ್ಪುತ್ತಿಲ್ಲ ಎನ್ನುತ್ತಾರೆ ಪಿ.ಈ.ಸುರೇಶ್ಬಾಬು ಹೇಳಿದ್ದಾರೆ.