ಚಳ್ಳಕೆರೆ: ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಬಡವರ ಅನುಕೂಲಕ್ಕಾಗಿ ಉಚಿತ ಭೋಜನಾಲಯ ತೆರೆದಿದ್ದು, ಹಸಿದು ಬರುವ ಎಲ್ಲರಿಗೂ ಊಟ ಸಿಗುವಂತೆ ನೋಡಿಕೊಳ್ಳಿ ಎಂದು ಸಂಸದ ಎ.ನಾರಾಯಣಸ್ವಾಮಿ ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಸಾರಿಗೆ ಬಸ್ ನಿಲ್ದಾಣದ ಸಮೀಪ ಇತೀಚೆಗೆ ಆರಂಭಗೊಂಡ ಉಚಿತ ಭೋಜನಾಲಯದಲ್ಲಿ ಕೂಲಿ ಕಾರ್ಮಿಕರಿಗೆ ಊಟ ಬಡಿಸಿ ಮಾತನಾಡಿದರು.
ಲಾಕ್ಡೌನ್ ಕಾರಣ ಹೋಟೆಲ್ಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ವಸ್ತು ಖರೀದಿಗೆ ನಗರಕ್ಕೆ ಬರುವ ಬಡವರು ಊಟವಿಲ್ಲದೆ ಪರದಾಡುವಂತಾಗಿದೆ. ಇವರ ಹಸಿವು ನೀಗಿಸಲಿಕ್ಕಾಗಿ ಉಚಿತ ಭೋಜನಾಲಯ ತೆರೆಯಲಾಗಿದ್ದು, ಇದು ಲಾಕ್ಡೌನ್ ಮುಗಿಯುವವರೆಗೂ ಮುಂದುವರಿಯಲಿದೆ. ಕಾರ್ಯಕರ್ತರು ದೈಹಿಕ ಅಂತರ ಕಾಯ್ದುಕೊಂಡು ಊಟ ಬಡಿಸಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಉಚಿತ ಭೋಜನಾಲಯದಲ್ಲಿ ಬೆಳಗ್ಗೆ 8ರಿಂದ 11ರ ವರೆಗೆ ತಿಂಡಿ, ಮಧ್ಯಾಹ್ನ 1ರಿಂದ 4ರ ವರೆಗೆ ಊಟದ ವ್ಯವಸ್ಥೆ ಇರುತ್ತದೆ. ಊಟ ತಯಾರಿಕೆ ಮತ್ತು ನಿರ್ವಹಣೆಗೆ 15 ಜನ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಸ್ವಚ್ಛತೆ, ದೈಹಿಕ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮ್ದಾಸ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜರೆಡ್ಡಿ, ಮಂಡಲ ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ಬಿ.ಎಸ್.ಶಿವಪುತ್ರಪ್ಪ, ಮಾತೃಶ್ರೀ ಮಂಜುನಾಥ, ದಿನೇಶ್ರೆಡ್ಡಿ, ಆರ್.ಡಿ.ಮಂಜಣ್ಣ, ಮೋಹನ್ ಕುಮಾರ್, ಬಿ.ತಿಪ್ಪೇಸ್ವಾಮಿ, ವಿಜಯಕುಮಾರ್, ಕಾಂತರಾಜ್ ಇತರರಿದ್ದರು.