More

    ಸಾಧಿಸಿ ಇಲ್ಲವೇ ಗಂಟುಮೂಟೆ ಕಟ್ಟಿ! ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣ

    ಸಂಸದರ ಗೆಲುವಿಗೆ ಮೋದಿಯ ಹೆಸರು ಸಾಕಾಗಬಹುದೇನೋ, ಆದರೆ ಶಾಸಕರ ಗೆಲುವಿಗೆ ಸಾಲುವುದಿಲ್ಲ. ಮತದಾರರು ಕೊಟ್ಟ ಮಾತನ್ನು ಉಳಿಸಿಕೊಂಡವರಿಗಾಗಿ ಅರಸುತ್ತಾರೆ. ಮಾತಿಗೆ ತಪ್ಪಿ ನಡೆದವರನ್ನು ಚುನಾವಣೆ ಹೊತ್ತಲ್ಲಿ ಪಾಠ ಕಲಿಸುತ್ತಾರೆ. ಆಗ ಕಣ್ಣೀರಿಟ್ಟರೆ ಲಾಭವಾಗದು.

    ಯಾಕೋ ಈ ಬಾರಿ ಬಿಹಾರ ಚುನಾವಣೆಯ ಫಲಿತಾಂಶ ಬಂದಮೇಲೆ ಕಳೆದ ಬಾರಿಯ ಫಲಿತಾಂಶದ ಸಂತೋಷಕ್ಕೆ ಸಾಧಿಸಿ ಇಲ್ಲವೇ ಗಂಟುಮೂಟೆ ಕಟ್ಟಿ! ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣರಾಶಿ ರಾಶಿ ಕಾಣೇಮೀನು ತಿಂದು ಸಂಭ್ರಮಿಸಿದವರು ಕಾಣಲೇ ಇಲ್ಲ. ಎಕ್ಸಿಟ್ ಪೋಲುಗಳನ್ನು ನೋಡುವಾಗ ಇದ್ದ ಸಂಭ್ರಮ ನಿಜವಾದ ಫಲಿತಾಂಶ ಬಂದಾಗ ಅನೇಕರಲ್ಲಿ ಮಾಯವಾಗಿತ್ತು. ಫಲಿತಾಂಶದ ವಿಶ್ಲೇಷಣೆಗೆ ತುಂಬ ತಡವಾಯಿತೆನ್ನಿಸಿದರೂ ಬಿಹಾರ ಚುನಾವಣೆ ತೋರುವ ದಿಕ್ಕನ್ನು ಅವಲೋಕನ ಮಾಡುವುದೊಳಿತು ಎಂಬ ಕಾರಣಕ್ಕೆ ಈ ಲೇಖನ.

    ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ಸು ಚುನಾವಣಾ ಪ್ರಕ್ರಿಯೆಗಳನ್ನು ಹಾಳು ಮಾಡಿ ಇನ್ನು ಮುಂದೆ ಭಾರತದಲ್ಲಿ ನಿಷ್ಪಕ್ಷಪಾತವಾದ ಚುನಾವಣೆಗಳು ನಡೆಯಬಹುದೆಂಬ ಭರವಸೆಯನ್ನೇ ಕಳೆದು ಹಾಕಿಬಿಟ್ಟಿದ್ದವು. ಜಾತಿಯ ಮೇಲಾಟಗಳು, ಹಣ, ಹೆಂಡದ ಹೊಳೆ, ಇವೆಲ್ಲವೂ ತಡೆಯಲಾಗದಷ್ಟು ವ್ಯಾಪಕವಾಗಿಬಿಟ್ಟಿದ್ದವು. ಶುದ್ಧ ರಾಜಕಾರಣದ ಪ್ರತೀಕವಾಗಿ ಸಮಾಜದ ಮುಂದೆ ನಿಂತಿದ್ದ ತಿಲಕರು, ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ಆನಂತರದ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ, ಪಂಡಿತ್ ದೀನದಯಾಳ ಉಪಾಧ್ಯಾಯ ಇವರೆಲ್ಲರ ಕಲ್ಪನೆಗೆ ಮಸಿ ಬಳಿಯುವಂಥ ಚುನಾವಣಾ ಶೈಲಿ ನಮ್ಮದಾಗಿತ್ತು. ಮೋದಿ ಅಧಿಕಾರಕ್ಕೆ ಬಂದಿದ್ದು ಆ ದೃಷ್ಟಿಯಿಂದ ಬಲುದೊಡ್ಡ ಪರಿವರ್ತನೆ. ಅಲ್ಲಿಯವರೆಗೂ ಜಾತಿಯ ರಗಳೆಗಳನ್ನು ಬಿಟ್ಟು ಒಬ್ಬ ವ್ಯಕ್ತಿ ನಾಯಕನಾಗಿ ಹೊರಹೊಮ್ಮುವುದು ಸಾಧ್ಯವೇ ಇಲ್ಲವೆಂದೇ ದೇಶ ಭಾವಿಸಿತ್ತು. ಆ ಧೈರ್ಯದ ಮೇಲೆಯೇ ಮೋದಿ ಸ್ವಂತಬಲದ ಮೇಲೆ ಪ್ರಧಾನಿಯಾಗುವುದು ಸಾಧ್ಯವೇ ಇಲ್ಲ ಎಂದು ದೇವೇಗೌಡರು ಭವಿಷ್ಯವಾಣಿ ನುಡಿದಿದ್ದು. ಹದಗೆಟ್ಟ ವ್ಯವಸ್ಥೆ ಮೇಲೆ ಅವರಿಗೆಷ್ಟು ವಿಶ್ವಾಸವಿತ್ತೆಂದರೆ ಮೋದಿ ಸ್ವಂತಬಲದ ಮೇಲೆ ಪ್ರಧಾನಿಯಾದರೆ ದೇಶ ಬಿಟ್ಟೇ ಹೋಗುತ್ತೇನೆಂಬ ಸಂಕಲ್ಪವನ್ನೂ ಅವರು ಮಾಡಿಬಿಟ್ಟಿದ್ದರು. ಅವರು ಹೇಳಿದ ಚುನಾವಣೆಯಲ್ಲದೆ ಐದು ವರ್ಷಗಳ ನಂತರ ನಡೆದ ಮತ್ತೊಂದು ಚುನಾವಣೆಯಲ್ಲಿಯೂ ಮೋದಿ ಸ್ವಂತಬಲದ ಮೇಲೆಯೇ ಅಧಿಕಾರಕ್ಕೆ ಬಂದಿದ್ದಾರೆ! ದೇವೇಗೌಡರು ಮಾತ್ರ ತಣ್ಣಗೇ ಉಳಿದಿದ್ದಾರೆ. ಇಲ್ಲಿ ಆಕ್ಷೇಪ ದೇವೇಗೌಡರ ಮೇಲಲ್ಲ. ಬದಲಿಗೆ ವ್ಯವಸ್ಥೆ ಪರಿವರ್ತನೆಯಾಗುತ್ತಿರುವುದರ ಲಕ್ಷಣಗಳು ಎದ್ದೆದ್ದು ಕಾಣುತ್ತಿರುವುದರ ಬಗ್ಗೆ. ಇದಕ್ಕೆ ವಿಶ್ವಾಸ ತುಂಬಬಲ್ಲ ಚುನಾವಣೆ ಬಿಹಾರದ್ದು.

    ಕಾಂಗ್ರೆಸ್ಸಿನಲ್ಲಿ ನಾಯಕತ್ವಕ್ಕೆ ನಿಷ್ಠೆ ಹೊಸತೇನೂ ಅಲ್ಲ. ಅನೇಕ ಬಾರಿ ಅವರುಗಳಿಗೆ ಪಕ್ಷಕ್ಕಿಂತ ನಾಯಕರೇ ದೊಡ್ಡವರು. ಅದು ಗಾಂಧೀಜಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ದೇಶಕ್ಕೆ ಹಾನಿಯಾದರೂ ಪರವಾಗಿಲ್ಲ, ಗಾಂಧೀಜಿ ಮಾತನ್ನು ಮೀರುವಂತಿಲ್ಲ ಎಂದು ಶುರುವಾದದ್ದು. ಚೀನಾದೆದುರು ತಲೆ ಬಾಗಿದರೂ ಪರವಾಗಿಲ್ಲ, ನೆಹರು ಮಾತು ಮೀರುವಂತಿಲ್ಲ ಎಂಬಲ್ಲಿಗೆ ಹೋಗಿ ನಿಂತಿತು. ಈಗಂತೂ ಕಾಂಗ್ರೆಸ್ಸೇ ಸತ್ತುಹೋದರೂ ಪರವಾಗಿಲ್ಲ, ಸೋನಿಯಾ-ರಾಹುಲ್ ವಿರುದ್ಧ ಮಾತನಾಡುವಂತಿಲ್ಲ ಎನ್ನುವವರೆಗೂ ಬಂದು ನಿಂತುಬಿಟ್ಟಿದೆ! ಆದರೆ ಬಿಹಾರ ಫಲಿತಾಂಶದಿಂದ ಈ ಪರಿಯ ಕುಟುಂಬನಿಷ್ಠೆಗೆ ವಿದಾಯ ಹೇಳುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ಸೋನಿಯಾ ಮಾತು ಮೀರದಿದ್ದ ಕಪಿಲ್ ಸಿಬಲ್ ಎದುರಾಡುತ್ತಿರುವುದನ್ನು ನೋಡಿದರೆ ಬಿಹಾರ ಚುನಾವಣೆ ಇವರುಗಳನ್ನು ಹೇಗೆ ಹಿಂಡಿರಬಹುದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆಯಷ್ಟೆ. ಇವರುಗಳ ನಡುವೆಯೂ ಇನ್ನು ಸೋನಿಯಾ-ರಾಹುಲ್ ಪರ ನಿಷ್ಠೆ ಇರುವ ಕಾಂಗ್ರೆಸ್ಸಿಗರಿಗೇನೂ ಕೊರತೆ ಇಲ್ಲ. ಬಹುಶಃ ಇನ್ನೊಂದಷ್ಟು ರಾಜ್ಯಗಳ ಚುನಾವಣೆಗಳಲ್ಲಿ ದೊರಕಲಿರುವ ಸೋಲು ಅವರಿಗೆ ಬುದ್ಧಿ ತರಿಸಬಹುದು.

    ಬಿಹಾರ ಚುನಾವಣೆಯ ಮತ್ತೊಂದು ಶ್ರೇಷ್ಠ ಪ್ರಗತಿ ಎಂದರೆ ಜಾತಿಯ ಗೋಡೆಗಳು ನುಚ್ಚುನೂರಾಗಿ ಉರುಳಿ ಹೋಗಿರೋದು. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಚುನಾವಣೆಯ ಲೆಕ್ಕಾಚಾರ ಜಾತಿಗಳ ಆಧಾರದ ಮೇಲೆ ನಡೆಯುವಂಥದ್ದು. ಬಿಹಾರದಲ್ಲಂತೂ ಮುಸ್ಲಿಂ-ಯಾದವ್ ಸಮೀಕರಣ, ಕ್ಷತ್ರಿಯ, ದಲಿತ, ಆದಿವಾಸಿ, ಮುಸ್ಲಿಂ ಈ ಸಮೀಕರಣ ಇವೆಲ್ಲವೂ ಈ ಬಾರಿ ಚರ್ಚೆಗೇ ಬರಲಿಲ್ಲ. ಇವುಗಳ ಆಧಾರದ ಮೇಲೆಯೇ ಮೂರು-ಮೂರು ಬಾರಿ ಅಧಿಕಾರದ ಗದ್ದುಗೆ ಹಿಡಿದಿದ್ದರು ಲಾಲುಪ್ರಸಾದ್ ಯಾದವ್. ಇವರ ಮಗ ತೇಜಸ್ವಿ ಮುಸ್ಲಿಂ-ಯಾದವ್ ಸಮೀಕರಣದ ಬದಲು ‘ಮಜ್ದೂರ್ ಯೂತ್’ (ಕಾರ್ವಿುಕ ಯುವಕ) ಸಮೀಕರಣವನ್ನು ಹೊಸೆದದ್ದು ವಿಶೇಷವಾಗಿತ್ತು. ಕಾಂಗ್ರೆಸ್ಸಿನ ನಾಯಕರು ಕಲಿಯದ ಪಾಠವನ್ನು ತೇಜಸ್ವಿ ಬಲುಬೇಗ ಕಲಿತುಬಿಟ್ಟಿದ್ದರು. ಹೈಸ್ಕೂಲ್ ಶಿಕ್ಷಣವನ್ನು ಪೂರ್ತಿ ಮುಗಿಸಲಾಗದ ತೇಜಸ್ವಿ ಆಕ್ಸ್​ಫರ್ಡ್, ಕೇಂಬ್ರಿಡ್ಜ್ ಗಳಲ್ಲಿ ಓದಿದ ಕಾಂಗ್ರೆಸ್ಸಿಗರಿಗಿಂತಲೂ ವೇಗವಾಗಿ ಜನರ ನಾಡಿ ಹಿಡಿದಿದ್ದರು. ಇದರ ಪರಿಣಾಮ ನಿತೀಶ್​ಕುಮಾರ್-ಮೋದಿ ಪಾಳಯಕ್ಕೂ ಅಚ್ಚರಿಯಾಗುವಂಥ ಸವಾಲನ್ನು ಮುಂದಿಟ್ಟರು. ಅವರ ಈ ದಾಳಕ್ಕೆ ನಿತೀಶ್ ಪಾಳಯ ಉತ್ತರಿಸಲು ಹೈರಾಣಾಗಿದ್ದು ಕಂಡುಬಂತು. ಒಟ್ಟಾರೆ ಜಾತಿಯ ಆಧಾರದ ಮೇಲೆ ಇನ್ನು ಮುಂದೆ ಚುನಾವಣೆ ಗೆಲ್ಲುವುದು ಸುಲಭವಲ್ಲ ಎನ್ನುವುದು ರಾಜಕೀಯ ಪಕ್ಷಗಳಿಗಂತೂ ಚುನಾವಣೆಗೆ ಮುನ್ನವೇ ಸ್ಪಷ್ಟವಾಗಿಹೋಗಿತ್ತು! ಸ್ವಲ್ಪ ಲಾಭ ಮಾಡಿಕೊಳ್ಳಲೆಂದು ರಾಹುಲ್ ಮತ್ತು ಪ್ರಿಯಾಂಕಾ ಹತ್ರಾಸ್ ಪ್ರಕರಣವನ್ನು ಅಗತ್ಯಕ್ಕಿಂತ ಹೆಚ್ಚು ಬಿಂಬಿಸಿ ಸುಳ್ಳುಗಳನ್ನು ಪೋಣಿಸಿ, ಅವಾರ್ಡ್ ವಾಪ್ಸಿ ಮಾದರಿಯ ಹೋರಾಟವನ್ನು ಹುಟ್ಟು ಹಾಕಬೇಕೆಂದು ಪ್ರಯತ್ನವನ್ನೂ ಮಾಡಿದರು. ಆದರೆ ಈ ರೀತಿ ಅವಾರ್ಡಗಳನ್ನು ಮರಳಿ ಕೊಡಬೇಕಾದವರೆಲ್ಲ ಅದಾಗಲೇ ಅವಾರ್ಡಗಳೇ ಇಲ್ಲದೆ ಖಾಲಿ ಕೂತಿರುವುದರಿಂದ ಅವರು ಸಹಾಯಕ್ಕೆ ಬರಲಾಗಲಿಲ್ಲ. ಜೊತೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಇಡಿಯ ಪ್ರಕರಣವನ್ನು ನಿರ್ವಹಿಸಿದ ರೀತಿ ಹೇಗಿತ್ತೆಂದರೆ ಸ್ವತಃ ಕಾಂಗ್ರೆಸ್ಸಿನ ಕಾಲಿಗೆ ಹಗ್ಗ ಸುತ್ತಿಕೊಳ್ಳಲಾರಂಭಿಸಿತ್ತು. ಜನರ ನೋವನ್ನು ಜಾತಿಸಂಘರ್ಷವಾಗಿ ಪರಿವರ್ತಿಸಿ ಮೈಚಳಿ ಕಾಯಿಸಿಕೊಳ್ಳುವ ಇದರ ಹಳೆಯ ವಿದ್ಯೆ ಜನರಿಗೀಗ ಪೂರ್ಣ ಅರಿವಿಗೆ ಬಂದಾಗಿತ್ತು. ಬಿಹಾರದ ಚುನಾವಣೆಯಲ್ಲಿ ಹತ್ರಾಸ್ ಸದ್ದು ಮಾಡಲಿಲ್ಲ. ಆದಿವಾಸಿಗಳನ್ನು, ಕ್ಷತ್ರಿಯರನ್ನು ಎತ್ತಿಕಟ್ಟುವ ಅವರ ಪ್ರಯತ್ನ ಲಾಭ ಕೊಡಲಿಲ್ಲ!

    ಈ ಚುನಾವಣೆಯಲ್ಲಿಯೇ ಪರಿವಾರವಾದ ಸತ್ತು ಹೋಯ್ತು. ತೇಜಸ್ವಿ ಸೋಲನ್ನು ಪರಿಪೂರ್ಣ ಸೋಲು ಎಂದು ಗಣಿಸಲಾಗದಿದ್ದರೂ ಅದು ಗೆಲುವಂತೂ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ದೊಡ್ಡ ನಾಯಕನ ಮಗ ಯಾರೇ ಆಗಿರಲಿ ಆತನನ್ನು ಬೆಂಬಲಿಸಬೇಕೆಂಬ ಮೂರ್ಖತನ ಈಗಿನ್ನು ಜನರಲ್ಲಿ ಉಳಿದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಬಿಹಾರ ಲಾಲುವಿನ ಮಗನನ್ನು ತಿರಸ್ಕರಿಸಿದ್ದಕ್ಕಿಂತಲೂ ಕೆಟ್ಟದ್ದಾಗಿ ಶರದ್ ಯಾದವ್​ರ, ಶತ್ರುಘ್ನ ಸಿನ್ಹಾರ ಇಂದಿನ ಪೀಳಿಗೆಯನ್ನು ಮನೆಗೆ ಕಳಿಸಿದೆ. ರಾಮ್​ಲಾಸ್ ಪಾಸ್ವಾನ್​ರ ಮಗ ಕೂಡ ನಿರೀಕ್ಷಿಸಿದ್ದನ್ನು ಸಾಧಿಸಲಾಗಲಿಲ್ಲ. ಇನ್ನು ಲಾಲುರೊಂದಿಗೆ ಗಲಾಟೆ ಮಾಡಿ 70 ಕ್ಷೇತ್ರಗಳನ್ನು ಸ್ಪರ್ಧಿಸಿದ ಕಾಂಗ್ರೆಸ್ಸನ್ನು ಬಿಹಾರದ ಮತದಾರ ಕಡೆಗಣ್ಣಿನಿಂದಲೂ ನೋಡದಿರುವುದು ಒಟ್ಟಾರೆ ವ್ಯವಸ್ಥೆಗೆ ಸಂದ ವಿಜಯ ಎಂದು ಧೈರ್ಯವಾಗಿ ಹೇಳಬಹುದು. ಆಗಬೇಕಾಗಿದ್ದು ಇದೇ. ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಈ ಪರಂಪರೆಗೆ ಮುಕ್ತಿ ಸಿಗಬೇಕು. ಸ್ವಂತ ಬಲದ ಮೇಲೆ ಜನರ ಸೇವೆ ಮಾಡುತ್ತ ಆ ಕಾರಣಕ್ಕಾಗಿಯೇ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವವರು ಇನ್ನು ಮುಂದೆ ಹೆಚ್ಚಿನ ಬೆಲೆ ಪಡೆದಾರು.

    ಬಿಹಾರದ ಚುನಾವಣೆ ನಿಸ್ಸಂಶಯವಾಗಿ ನಮ್ಮಂಥ ಸಾಮಾನ್ಯ ಮತದಾರರ ಆಸೆ-ಆಕಾಂಕ್ಷೆಗಳಿಗೆ ನೀರೆರೆದಿದೆ. ಏಕೆಂದರೆ ಚುನಾವಣೆಯುದ್ದಕ್ಕೂ ನಡೆದ ಚರ್ಚೆ ಪ್ರಗತಿಯ ಕುರಿತೇ ಆಗಿತ್ತು. ಅಲ್ಲಲ್ಲಿ ಜಾತಿಯ ವಿಚಾರಗಳು ವಾದ-ವಿವಾದಗಳಿಗೆ ಕಾರಣವಾಗಿದ್ದರೂ ಒಟ್ಟಾರೆ ಮುನ್ನೆಲೆಗೆ ಬಂದಿದ್ದು ವಿಕಾಸದ ವಿಚಾರವೇ. ತೇಜಸ್ವಿ ಯಾದವ್ ಹತ್ತು ಲಕ್ಷ ಉದ್ಯೋಗಗಳನ್ನು ಕೊಡುವ ಭರವಸೆ ಕೊಡುವುದರೊಂದಿಗೆ ಇದಕ್ಕೆ ಭೂಮಿಕೆ ಸಿದ್ಧವಾಯ್ತು. ಅದು ಅಸಾಧ್ಯವೆಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿದ್ದರೂ ಚುನಾವಣೆ ಪ್ರಚಾರದ ಈ ತಿರುವು ಮೆಚ್ಚಬೇಕಾದ್ದೇ ಆಗಿತ್ತು. ಇದಕ್ಕೆ ಪ್ರತಿಸ್ಪಂದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ ನಿತೀಶ್ ಕುಮಾರ್ ಉದ್ಯೋಗಸೃಷ್ಟಿಯ ಬಗ್ಗೆ ಮಾತನಾಡಲಾರಂಭಿಸಿದರು. ನರೇಂದ್ರ ಮೋದಿಯವರಂತೂ ಪ್ರತಿ ಭಾಷಣದಲ್ಲೂ ಕೊಟ್ಟ ಮಾತನ್ನು ಹೇಗೆ ಉಳಿಸಿಕೊಂಡಿದ್ದೀವಿ ಎಂಬ ಮಾಹಿತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಕೇಂದ್ರ-ರಾಜ್ಯಗಳೆರಡರಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿರುವುದು ವಿಕಾಸದ ರಾಜಮಾರ್ಗವನ್ನು ನಿರ್ವಿುಸಿದಂತೆ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಅಂತಿಮವಾಗಿ ಅವರು ಯಶಸ್ವಿಯಾದರು. ಹಿಂದೂ-ಮುಸ್ಲಿಂ ಸಂಘರ್ಷದ ಆಧಾರದ ಮೇಲೆ ಮತ ಕೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಪಕ್ಷಗಳಿಗೆ ಇನ್ನು ಈ ಬಗೆಯ ಧ್ರುವೀಕರಣ ನಡೆಯಲಾರದು ಎಂಬ ಅರಿವಾದದ್ದು ಬಿಹಾರದ ಚುನಾವಣೆಯಲ್ಲಿಯೇ. ಆದರೆ ಈ ವಿಕಾಸದ ಓಟದಲ್ಲಿ ಹಿಂದುಳಿದಿರುವುದು ಮಾತ್ರ ಮುಸಲ್ಮಾನರೇ! ಮತಾಂಧತೆಯ ತೀವ್ರತೆ ಅವರೊಳಗೆ ಅದೆಷ್ಟಿದೆಯೆಂದರೆ ಜಾತಿ ಎಂಬ ಒಂದೇ ಕಾರಣಕ್ಕೆ ದೇಶದ ಸುರಕ್ಷತೆಗೆ ಸಂಬಂಧಪಟ್ಟ ಆಯಕಟ್ಟಿನ ಸ್ಥಳಗಳಲ್ಲಿ ಓವೈಸಿಯ ಪಕ್ಷವನ್ನು ಗೆಲ್ಲಿಸಿಕೊಂಡು ರಾಜಕೀಯವಾಗಿ ತಮ್ಮ ದಡ್ಡತನವನ್ನು ಪ್ರದರ್ಶಿಸಿಕೊಂಡಿದ್ದಾರೆ. ಇದೊಂದೇ ಬಿಹಾರ ಚುನಾವಣೆಯ ಆತಂಕಕಾರಿ ಸಂಗತಿ!

    ಒಂದಂತೂ ಸತ್ಯ. ಚುನಾವಣೆಯ ಚರ್ಚಾ ವಿಷಯಗಳು ಬದಲಾಗುತ್ತಿವೆ. ಏಳು ದಶಕಗಳಿಂದ ಜನಮಾನಸದಲ್ಲಿ ಬಿತ್ತಿದ್ದ ಆರ್ಯ-ದ್ರಾವಿಡ ವಿಭಜನೆಗಳು ಇನ್ನು ಕೆಲಸ ಮಾಡಲಾರವು. ಹೀಗಾಗಿಯೇ ತಮಿಳುನಾಡಿನಲ್ಲಿಯೂ ಬಿಜೆಪಿಗೆ ಮುಕ್ತ ಸ್ವಾಗತ ದೊರೆಯುತ್ತಿದೆ. ಬಂಗಾಳದಲ್ಲಿ ದೀದಿ ಕಣ್ಣೀರು ಹಾಕುವ ಸ್ಥಿತಿಗೆ ಬಂದಿದ್ದಾರೆ. ಬದಲಾವಣೆಯ ಪರ್ವ ನಿಜಕ್ಕೂ ಆರಂಭವಾಗಿದೆ. ಇಂದಿರಾ ಗಾಂಧಿ ಮಾಡಿದ ತಪ್ಪಿನಿಂದಾಗಿ ಪ್ರಪಾತಕ್ಕೆ ಬೀಳುತ್ತಿದ್ದ ದೇಶ ಮತ್ತೆ ಸರಿ ಹಾದಿಗೆ ಬರುತ್ತಿದೆ. ಹಾಗಂತ ಈ ಅಲೆಯಲ್ಲಿ ಬಿಜೆಪಿಗರು ಕೊಚ್ಚಿ ಹೋಗುವಂತಿಲ್ಲ. ಮತದಾರ ಬುದ್ಧಿವಂತನಾಗಿದ್ದಾನೆಂದರೆ ಆತ ಮೋದಿಗೂ ನಿರಂತರವಾಗಿ ನಿಷ್ಠವಾಗಿರುತ್ತಾನೆ ಎಂದಲ್ಲ. ವಿಕಾಸದ ಪರವಾಗಿರುತ್ತಾನೆ ಎಂದರ್ಥ. ಸಂಸದರ ಗೆಲುವಿಗೆ ಮೋದಿಯ ಹೆಸರು ಸಾಕಾಗಬಹುದೇನೋ, ಆದರೆ ಶಾಸಕರ ಗೆಲುವಿಗೆ ಸಾಲುವುದಿಲ್ಲ. ಮತದಾರರು ಕೊಟ್ಟ ಮಾತನ್ನು ಉಳಿಸಿಕೊಂಡವರಿಗಾಗಿ ಅರಸುತ್ತಾರೆ. ಮಾತಿಗೆ ತಪ್ಪಿ ನಡೆದವರನ್ನು ಚುನಾವಣೆ ಹೊತ್ತಲ್ಲಿ ಪಾಠ ಕಲಿಸುತ್ತಾರೆ. ಆಗ ಕಣ್ಣೀರಿಟ್ಟರೆ ಲಾಭವಾಗದು. ಅವರೇ ನೀರೆರೆದು ಬೆಳೆಸಿದ ಜಾತಿಯ ಹೆಮ್ಮರವನ್ನು ಮುಲಾಜಿಲ್ಲದೆ ಕಡಿದು ಮತ್ತೆ ಚಿಗುರದಂತೆ ಆಸಿಡ್ ಸುರುವಿದರೆ ಒಳಿತು. ಸಾಧ್ಯವಾದರೆ ಅದೇ ಜಾಗದಲ್ಲಿ ವಿಕಾಸದ ಸುಂದರವಾದ ಸಸಿಯೊಂದನ್ನು ನೆಟ್ಟರೆ ಮೋದಿ ಅವಶ್ಯಕತೆ ಇಲ್ಲದೆಯೂ ಗೆಲುವು ಸಾಧಿಸಬಹುದು. ಯೋಗಿ ಆದಿತ್ಯನಾಥರು ಅಂಥದ್ದೇ ಒಂದು ಆದರ್ಶವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಂತ ಮಕ್ಕಳನ್ನು ಅಧಿಕಾರದ ಪಡಸಾಲೆಗಳಿಂದ ದೂರವಿಟ್ಟು ಪ್ರಜಾರಂಜಕನಾಗಿ ಶಾಸಕರು ಬೆಳೆದು ನಿಂತರೆ ಬರಲಿರುವ ದಿನಗಳು ಅವರ ಪಾಲಿಗೆ ಹಸಿರಾದೀತು.

    ಬಿಹಾರ ಕಾಂಗ್ರೆಸ್ಸಿಗೂ ಪಾಠ ಕಲಿಸಿದೆ. ನೀವು ಕೂಡಿ ಹಾಕಿರುವ ದುಡ್ಡು ಮತದಾರನ ಪಾಲಿಗೆ ಕಾಲ ಕಸ. ನಿಮ್ಮ ದರ್ಪ, ದುರಹಂಕಾರಗಳು ಇನ್ನು ನಡೆಯಲಾರದು. ಒಳ್ಳೆಯ ಆಡಳಿತ ಕೊಟ್ಟು ಜನರೊಂದಿಗೆ ಸೌಹಾರ್ದದಿಂದ ಬದುಕುವುದನ್ನು ಕಲಿತರೆ ಒಳಿತಾದೀತು. ನಿಮ್ಮ ಅಧ್ಯಕ್ಷರು ಯಾವ ಪರಂಪರೆಗೆ ಸೇರಿದವರೆಂಬುದು ಇನ್ನು ಮುಂದೆ ಮುಖ್ಯವಾಗಲಾರದು. ಸಮಾಜದ ಒಳಿತಿಗೆ ನೀವೇನು ಮಾಡಿದಿರೆಂಬುದಷ್ಟೆ ಇನ್ನು ಚರ್ಚೆಯ ವಿಷಯ. ಏಳು ದಶಕಗಳ ಕಾಲ ದೇಶವನ್ನು ಹಾಳು ಮಾಡಿದ್ದಕ್ಕೆ ಉತ್ತರಿಸಲು ಇನ್ನೂ ಕೆಲವು ಸಮಯ ನಿಮಗೆ ಬೇಕಾಗಬಹುದು. ಆದರೆ ಈ ಹಿಂದೆ ಐದು ವರ್ಷಗಳಲ್ಲಿ ಕರ್ನಾಟಕವನ್ನು ಹಾಳುಗೆಡವಿದಿರಲ್ಲ, ಅದನ್ನು ಸಮಾಜ ಪ್ರಶ್ನಿಸುತ್ತದೆ. ಚುನಾವಣೆಗಳ ಪ್ರಕ್ರಿಯೆಯಲ್ಲಿ ಮತದಾರನ ಮಾನಸಿಕ ಸ್ಥಿತಿಯಲ್ಲಿ ಕಂಡುಬಂದ ಈ ಬದಲಾವಣೆ ದೇಶದ ಪಾಲಿಗೆ ಬಲು ಹೆಮ್ಮೆಯ ವಿಚಾರ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts