ಬೆಂಗಳೂರು: ಕೇಂದ್ರ ಸಚಿವ ಸುರೇಶ್ ಅಂಗಡಿಯವರು ದೆಹಲಿಯ ಏಮ್ಸ್ನಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಸುರೇಶ್ ಅಂಗಡಿಯವರಿಗೆ 65 ವರ್ಷ ವಯಸ್ಸಾಗಿತ್ತು. 1955 ಜೂನ್ 1ರಂದು ಜನಿಸಿದ ಅಂಗಡಿಯವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿ ಸಂಸದರಾಗಿದ್ದರು. ಪ್ರಸ್ತುತ ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವರಾಗಿದ್ದರು.
ಅಂಗಡಿಯವರಿಗೆ ಸೆಪ್ಟೆಂಬರ್ 11ರಂದು ಕರೊನಾ ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣಗಳಿಲ್ಲದೇ ಕರೊನಾ ಪಾಸಿಟಿವ್ ವರದಿಯಾಗಿತ್ತು. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿದ್ದರು. ಅಂದಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ನಾನು #Covid19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ.
ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ.@PMOIndia
— Suresh Angadi (@SureshAngadi_) September 11, 2020
ಅಂಗಡಿಯವರು ಬೆಳಗಾವಿ ಜಿಲ್ಲೆ ಮತ್ತು ತಾಲೂಕಿನ ಕೆ.ಕೆ. ಕೊಪ್ಪ ಮೂಲದವರು. ಚೆನ್ನಬಸಪ್ಪ ಮತ್ತು ಸೋಮವ್ವ ದಂಪತಿಯ ಮಗನಾಗಿ ಹುಟ್ಟಿದ ಅಂಗಡಿಯವರ ಪೂರ್ಣ ಹೆಸರು ಸುರೇಶ್ ಚನ್ನಬಸಪ್ಪ ಅಂಗಡಿ. ಇವರು ಇಬ್ಬರು ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.