ಮೂಡಿಗೆರೆ: ಪ್ರಜಾಪ್ರಭುತ್ವ ಸಂವಿಧಾನದ ಆಶಯ ಉಲ್ಲಂಘಿಸಿ ಯಾವುದೇ ಸರ್ಕಾರಕ್ಕೆ ಆಡಳಿತ ನಡೆಸಲು ಅಧಿಕಾರವಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಹೇಳಿದರು.
ಶನಿವಾರ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಹಾಗೂ ಸಿಎಎ, ಎನ್ಪಿಆರ್ ವಿರೋಧಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಧರ್ಮ ಅವರವರ ಸ್ವಂತ ವಿಚಾರ. ದೇಶ ಎಲ್ಲ ಜಾತಿ, ಧರ್ಮದವರ ಸ್ವತ್ತು. ಪೌರತ್ವ ಕಾಯ್ದೆಯನ್ನು ಒಂದು ಧರ್ಮಕ್ಕೆ 5 ವರ್ಷ, ಇನ್ನೊಂದು ಧರ್ಮಕ್ಕೆ 11 ವರ್ಷ ಭಾರತದಲ್ಲಿ ನೆಲಸಿದವರಿಗೆ ನೀಡಲಾಗುತ್ತದೆ ಎಂದು ತಾರತಮ್ಯ ಮಾಡಿರುವುದು ಸಂವಿಧಾನಕ್ಕೆ ವಿರುದ್ಧವಾದುದು. ಇಂತಹ ಜನವಿರೋಧಿ ಕಾಯ್ದೆಯಿಂದ ದೇಶದ ಜನರು ಬೀದಿಗೆ ಬೀಳುತ್ತಾರೆ. ಇತಿಹಾಸದಲ್ಲಿ ಜನಶಕ್ತಿ ಮುಂದೆ ಬೇರೊಂದಿಲ್ಲ. ಜನ ದಂಗೆ ಎದ್ದರೆ ಗೆಲ್ಲೋದು ಜನರೇ ಎಂಬುದು ಅರ್ಥ ಮಾಡಿಕೊಂಡರೆ ಒಳ್ಳೆಯದು. ಇಲ್ಲವಾದರೆ ಸರ್ವನಾಶವಾಗುವುದು ನಿಶ್ಚಿತ ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನು ನಂಬಿದರೆ ಕೆಡುಕುಂಟಾಗುವುದು. ಕುಟುಂಬದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸಮಸ್ಯೆಗಳಿರುತ್ತವೆ. ಇಂತಹ ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಗೋಡೆಗೆ ಸುಣ್ಣ ಹೊಡೆಯಲು ಮುಂದಾದರೆ ಬಗೆಹರಿಯುವುದಿಲ್ಲ ಎಂದು ವಿಶ್ಲೇಷಿಸಿದರು.