ವಿಜಯಪುರ: ಕಾರ್ಪೋರೆಟ್ ಕೃಷಿ ಹಿಮ್ಮ್ಮೆಟ್ಟಿಸಿ, ರೈತಾಪಿ ಕೃಷಿ ರಕ್ಷಿಸುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್ಕೆಎಸ್) ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ರೈತ ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ.ಭಗವಾನ್ರೆಡ್ಡಿ ಮಾತನಾಡಿ, ದೇಶಾದ್ಯಂತ ಹರಡಿರುವ ಕರೊನಾದಿಂದ ಭಾರತದ ರೈತರು ಈಗಾಗಲೇ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಧೀರ್ಘ ಕರೊನಾ ಲಾಕ್ಡೌನ್ ಅನಗತ್ಯ ಲಾಭ ಪಡೆದುಕೊಳ್ಳುವ ಮೂಲಕ ಅಸ್ತಿತ್ವದಲ್ಲಿರುವ ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದು ಜನವಿರೋಧಿ ಹಾಗೂ ರೈತವಿರೋಧಿ ನಡೆಯಾಗಿದೆ ಎಂದರು.
ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಒಂದು ರಾಷ್ಟ್ರ ಒಂದು ಮಾರುಕಟ್ಟೆ ಎಂಬ ಹೆಸರಿನಲ್ಲಿ ಜಾರಿಗೊಳಿಸಿರುವ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆ ಕಾಯ್ದೆ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಯಾರಾದರೂ ಎಲ್ಲಿಯಾದರೂ ಔಪಚಾರಿಕ ಪರವಾನಗಿಯಿಲ್ಲದೆ ಖರೀದಿಸಬಹುದು ಎಂದು ಹೇಳುತ್ತದೆ. ಇದರ ಮೇಲೆ ರಾಜ್ಯಗಳಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ ಕಾಯ್ದೆ ಮೂಲಕ ಈಗಿರುವ ಎಪಿಎಂಸಿಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ, ಈ ಕಾಯ್ದೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಆರ್ಕೆಎಸ್ ಸಂಘಟನಾಕಾರರಾದ ಮಹಾದೇವ ಲಿಗಾಡೆ, ಆಕಾಶ ಪಾಟೀಲ, ತಿಪರಾಯ ಹತ್ತರಕಿ, ಪ್ರಕಾಶ ಕಿಲಾರೆ, ವಿಶ್ವನಾಥ ನರಳೆ ಸೇರಿದಂತೆ ಮತ್ತಿತರರು ಇದ್ದರು.