ನವದೆಹಲಿ: ರಾಷ್ಟ್ರದಲ್ಲಿ ಗಂಭೀರ ಸ್ವರೂಪ ಪಡೆದಿರುವ ನಿರುದ್ಯೋಗ ಹಾಗೂ ಆರ್ಥಿಕ ಹಿಂಜರಿತದ ಬಗ್ಗೆ ನಾಗರಿಕರು ಗಮನ ಹರಿಸಿದಂತೆ ಮಾಡಲು ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ಆರ್ಸಿಯನ್ನು ಜಾರಿಗೊಳಿಸುತ್ತಿದೆ ಎಂದು ಭಾರತೀಯರು ನಂಬಿದ್ದಾರೆ.
ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಇದು ವ್ಯಕ್ತವಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪ್ರಸ್ತಾವಿತ ಅಖಿಲ ಭಾರತ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ವಿಷಯಗಳನ್ನು ಮುಂದಿಟ್ಟುಕೊಂಡು ನಿರುದ್ಯೋಗ ಹಾಗೂ ಜಿಡಿಪಿ ಕುಸಿತದ ಬಗ್ಗೆ ನಾಗರಿಕರು ಗಮನ ಹರಿಸದಂತೆ ಮಾಡಲು ನರೇಂದ್ರ ಮೋದಿ ಸರ್ಕಾರ ಮಾಡಿರುವ ಪ್ರಯತ್ನ ಎಂದು ಶೇ.43 ಮಂದಿ ನಂಬಿದ್ದಾರೆ.
ಆದರೆ ಶೇ.32 ಮಂದಿ ಜನರ ಗಮನ ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಪ್ರಯತ್ನ ಎಂದು ನಂಬಿಲ್ಲ. ಶೇ.25 ಮಂದಿ ಜನರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಪ್ರದೇಶವಾರು ಪ್ರತಿಕ್ರಿಯೆ: ದಕ್ಷಿಣ ಭಾರತದಲ್ಲಿ ಶೇ.50 ಮಂದಿ ಈ ಕಾಯ್ದೆಗಳು ನಾಗರಿಕರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ನಂಬಿದ್ದಾರೆ. ಉತ್ತರ ಶೇ.40 ಪೂರ್ವ ಶೇ.44 ಹಾಗೂ ಪಶ್ಚಿಮ ಪ್ರದೇಶಗಳ ಶೇ.41 ಮಂದಿ ಗಮನ ಬೇರೆಡೆ ಸೆಳೆಯುವುದು ಎಂದು ಭಾವಿಸಿದ್ದಾರೆ.
ಧರ್ಮವಾರು ಕೂಡ ಸಮೀಕ್ಷೆ ನಡೆಸಲಾಗಿದ್ದು ಶೇ.42 ಮಂದಿ ಹಿಂದುಗಳು ಹಾಗೂ ಶೇ. 55 ಮಂದಿ ಮುಸ್ಲಿಮರು ಕಾಯ್ದೆ ಗಮನ ಬೇರೆಡೆಗೆ ಸಳೆಯುವುದು ಎಂದು ನಂಬಿದ್ದಾರೆ ಎಂದು ತಿಳಿಸಿದೆ.
ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಕೂಡ ಕೇಂದ್ರ ಸರ್ಕಾರ ನಿರುದ್ಯೋಗ ಮರೆ ಮಾಚಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮೋರೆ ಹೋಗಿದ್ದಾರೆ ಎಂದು ಟೀಕಿಸುತ್ತಿವೆ. (ಏಜೆನ್ಸೀಸ್)