ಬೆಳಗಾವಿ: ಸಿಡಿ ಪ್ರಕರಣ ರಾಜಕೀಯ ಷಡ್ಯಂತ್ರವಾಗಿದೆ. ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿದ ಪ್ರತಿಭಟನಾಕಾರರು, ತನಿಖೆಯಾಗಿ ಸತ್ಯ ಹೊರಬರಲಿ. ರಮೇಶ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಪೃಥ್ವಿಸಿಂಗ್ ಮಾತನಾಡಿ, ಸಂತ್ರಸ್ತೆ ಯಾರೆಂದು ಗೊತ್ತಿಲ್ಲ. ವಿಡಿಯೋದಲ್ಲಿನ ಯುವತಿ ದುಬೈಗೆ ಹೋಗಿದ್ದಾಳೆ ಎಂದು ಹೇಳುತ್ತಿದ್ದಾರೆ. ದುಬೈಗೆ ಹೋಗುವ ಅವಶ್ಯಕತೆ ಏನಿತ್ತು? ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಹಾಗಾಗಿ ದಿನೇಶ ಕಲ್ಲಹಳ್ಳಿ ನೀಡಿರುವ ದೂರು ಸ್ವೀಕರಿಸಬಾರದು ಎಂದು ಕೋರಿದರು. ಶಂಕರಗೌಡ ಪಾಟೀಲ, ವಿಜಯಾ ಹಿರೇಮಠ, ಮಹಾಂತೇಶ ಆರ್.ಎ., ಆಸಿಫ್ ಮುಲ್ಲಾ, ಪ್ರಕಾಶ ದೊಡ್ಡಮನಿ ಸೇರಿದಂತೆ ರಮೇಶ ಜಾರಕಿಹೊಳಿ ಬೆಂಬಲಿಗರು ಪಾಲ್ಗೊಂಡಿದ್ದರು.