ನವದೆಹಲಿ: ಎಷ್ಟೋ ಪ್ರಕರಣಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಅಪರಾಧವನ್ನು ಸಾಬೀತು ಪಡಿಸಲು, ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗಿದೆ. ಹಾಗಂತ ಸಿಸಿಟಿವಿ ದೃಶ್ಯಾವಳಿ ಇರದಿದ್ದರೆ ಅಪರಾಧವೇ ನಡೆದಿಲ್ಲ ಎನ್ನಲಾಗದು. ಹೀಗೆಂದು ಪ್ರಕರಣವೊಂದರಲ್ಲಿ ಹೈಕೋರ್ಟ್ ಹೇಳಿದೆ.
ಪ್ರಕರಣವೊಂದರಲ್ಲಿ ಸಿಸಿಟಿವಿ ದೃಶ್ಯಾವಳಿ ಲಭ್ಯ ಇಲ್ಲದ್ದರ ಪ್ರಯೋಜನ ಪಡೆದು ಜಾಮೀನು ಪಡೆಯಲು ಆರೋಪಿಯೊಬ್ಬ ಯತ್ನಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದೆಹಲಿ ಹೈಕೋರ್ಟ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2020ರ ಫೆಬ್ರವರಿ 24ರಂದು ಮೌಜ್ಪುರ್ ಚೌಕ್ನಲ್ಲಿ ಗಲಭೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇಲೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಮೇಲೆ ಮಾರ್ಚ್ 12ರಂದು ಸಲ್ಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ ಗಲಭೆ ನಡೆದ ಬಗ್ಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿಲ್ಲ ಎಂಬುದನ್ನೇ ಆಧಾರವಾಗಿಸಿ ಆರೋಪಿ ಜಾಮೀನು ಪಡೆಯಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಮೇಲಿನಂತೆ ಅಭಿಪ್ರಾಯ ಪಟ್ಟ ಕೋರ್ಟ್, ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. (ಏಜೆನ್ಸೀಸ್)