ನವದೆಹಲಿ: ಐಎಂಎ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ತನಿಖೆಗಿಳಿದಿರುವ ಸಿಬಿಐ ಅಧಿಕಾರಿಗಳು ಮತ್ತಷ್ಟು ಚುರುಕು ಮುಟ್ಟಿಸಿದ್ದು, 28 ಮಂದಿ ವಿರುದ್ಧ ಪೂರಕ ಚಾರ್ಜ್ಶೀಟ್ ದಾಖಲಿಸಿದ್ದಾರೆ.
ಸುಮಾರು 4 ಸಾವಿರ ಕೋಟಿ ರೂಪಾಯಿನ ಈ ಹಗರಣ ಸಂಬಂಧ ಕಂಪನಿಯ ಎಂಡಿ ಹಾಗೂ ಸಿಇಒ ಮೊಹಮದ್ ಮನ್ಸೂರ್ ಖಾನ್ ಸೇರಿ ಅನೇಕ ಹಿರಿಯ ಅಧಿಕಾರಿಗಳೂ ಆರೋಪಿಗಳಾಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಂಬಂಧಿತ ನ್ಯಾಯಾಲಯದಲ್ಲಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.
ಐಜಿಪಿ ಹೇಮಂತ್ ನಿಂಬಾಳ್ಕರ್, ಎಸ್ಪಿ ಅಜಯ್ ಹಿಲೊರಿ, ಡಿವೈಎಸ್ಪಿ ಇ.ಬಿ. ಶ್ರೀಧರ, ಇನ್ಸ್ಪೆಕ್ಟರ್ ಎಂ. ರಮೇಶ್, ಎಸ್ಐ ಪಿ.ಗೌರಿಶಂಕರ್ ಹಾಗೂ ಆಗ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಎಲ್.ಸಿ.ನಾಗರಾಜ್ ಅವರ ಹೆಸರನ್ನು ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಎಂಎ ಕಂಪನಿಯ ನಿರ್ದೇಶಕರಾದ ನಿಜಾಮುದ್ದೀನ್, ನಸೀರ್ ಹುಸೇನ್, ನವೀದ್ ಅಹಮದ್ ನಟ್ಟಂಕರ್, ವಸೀಂ, ಅರ್ಷದ್ ಖಾನ್ ಹಾಗೂ ಅಫ್ಸರ್ ಪಾಷಾ ಅವರ ಹೆಸರುಗಳೂ ಜಾರ್ಜ್ಶೀಟ್ನಲ್ಲಿವೆ ಎನ್ನಲಾಗಿದೆ. ಐಎಂಎ ಪ್ರಕರಣ 2018ರಲ್ಲಿ ಬೆಳಕಿಗೆ ಬಂದಿತ್ತು, ಬಳಿಕ ಮನ್ಸೂರ್ ಅಲಿಖಾನ್ ಬಂಧನ ಕೂಡ ನಡೆದಿದೆ.